ಗುರುರಾಜ್ ಜೇಷ್ಠ ಅವರ ನಿರ್ದೇಶನದ ಹರೀಶ ವಯಸು 36 ವಿಭಿನ್ನ ಕರಾವಳಿ ಸೊಗಡಿನ ಕಥಾಹಂದರ ಹೊಂದಿರುವ ಚಿತ್ರ. ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಶೀರ್ಷಿಕೆ ಗೀತೆಯನ್ನು ಪುನೀತ್ ರಾಜಕುಮಾರ್ ಅವರು ಹಾಡಿದ್ದು, ತಮ್ಮ ಪಿಆರ್ಕೆ ಸ್ಟುಡಿಯೋದಲ್ಲಿ ಅವರು ಹಾಡಿದ ಮೊದಲ ಚಿತ್ರಗೀತೆ ಎಂಬ ಹೆಗ್ಗಳಿಕೆ ಹರೀಶಣ್ಣಂಗೆ ವಯಸ್ಸು 36 , ಮದುವೆ ಆಗಿಲ್ಲಂತ ಬೇಜಾರು ಎಂಬ. ಈ ಹಾಡಿಗಿದ್ದು, ಯೂಟ್ಯೂಬ್ ಸೇರಿದಂತೆ ಎಲ್ಲೆಡೆ ವೈರಲ್ ಆಗಿದೆ.
ಮೊನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಹಿರಿಯನಟ ಉಮೇಶ್, ನಿರ್ಮಾಪಕ ಲಕ್ಷ್ಮೀಕಾಂತ್ ಹೆಚ್.ವಿ.ರಾವ್, ನಿರ್ದೇಶಕ ಗುರುರಾಜ್ ಜ್ಯೇಷ್ಠ, ನಟಿ ದೀಪಿಕಾರಾಮ್, ವಿತರಕ ವಿಜಯಕುಮಾರ್ ಹಾಜರಿದ್ದರು.
ನಾಯಕನ ತಂದೆಯಾಗಿ ನಟಿಸಿರುವ ಕನ್ನಡ ಚಿತ್ರರಂಗದ ಹಿರಿಯನಟ ಉಮೇಶ್ ಮಾತನಾಡುತ್ತ ನಾನು ಹೆಚ್ಚಾಗಿ ಹಾಸ್ಯಪಾತ್ರಗಳನ್ನೇ ಮಾಡುತ್ತ ಬಂದವನು, ಆದರೆ ಈ ಚಿತ್ರದಲ್ಲಿ ಸ್ವಲ್ಪ ಗಂಭೀರವಾದ ಪಾತ್ರವಿದೆ. ಮಂಗಳೂರು ಎಂದರೆ ಕಲೆಯ ತವರೂರು, ಯಕ್ಷಗಾನದಂಥ ಕಲೆಗಳಿಗೆ ಬೇರು, ಇಂಥ ಮಂಗಳೂರಿನವರೇ ಸೇರಿ ಮಾಡಿರುವ ಈ ಚಿತ್ರ ನನಗೆ ಬಹಳ ಇಷ್ಟವಾಯಿತು, ಇಲ್ಲಿ ನಾಯಕ ಅಂತೇನೂ ಇಲ್ಲ, ಕಥೆಯೇ ನಾಯಕ, ಲಕ್ಷಿಕಾಂತ್ ಅವರು ಬರೀ ನಿರ್ಮಾಪಕರಷ್ಟೇ ಅಲ್ಲ, ಸಿಂಗರ್ ಕೂಡ. ಒಂದು ಹಾಡನ್ನು ಹಾಡಿದ್ದಾರೆ, ಎಲ್ಲರೂ ಇಷ್ಟಪಟ್ಟು ಈ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು. ನಿರ್ಮಾಪಕ ಲಕ್ಷಿಕಾಂತ್ ಮಾತನಾಡುತ್ತ ಚಿತ್ರ ಬಿಡುಗಡೆಯಾಗುವ ಖುಷಿ, ಆತಂಕ ಎರಡೂ ಇದೆ. ಉಮೇಶಣ್ಣ ಅವರ ಪುತ್ರ ಇತ್ತೀಚೆಗೆ ತೀರಿಕೊಂಡಿದ್ದರು, ಚಿತ್ರದಲ್ಲೊಂದು ಎಮೋಷನಲ್ ಸೀನ್ ಇದೆ, ಆಗವರು ತಮ್ಮ ಮಗನನ್ನು ನೆನಪಿಸಿಕೊಂಡು ಕಣ್ಣೀರು ಬರಿಸಿಕೊಂಡರು, ಈಚೆಗೆ ಹುಬ್ಬಳ್ಳಿ, ದಾವಣಗೆರೆಗೆ ಪ್ರಚಾರಕ್ಕೆ ಹೋದಾಗ ಜನರ ರಿಯಾಕ್ಷನ್ ನೋಡಿ ತುಂಬಾ ಸಂತೋಷವಾಯಿತು, ವಿತರಕ ವಿಜಯಕುಮಾರ್ ಅವರು ನಮ್ಮಜೊತೆ ಇದ್ದು, ಥೇಟರ್ ಸೆಟಪ್ ಮಾಡಿಕೊಡುತ್ತಿದ್ದಾರೆ ಎಂದರು. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ದೀಪಿಕಾರಾಮ್ ಮಾತನಾಡುತ್ತ ಚಿತ್ರದಲ್ಲಿ ಒಳ್ಳೇ ಪಾತ್ರ ಮಾಡಿದ್ದೇನೆ. ಮಂಗಳೂರು ಕನ್ನಡ ಎಷ್ಟು ಮುದ್ದಾಗಿದೆಯೋ ಅಷ್ಟೇ ಸೊಗಸಾಗಿದೆ ಈ ಸಿನಿಮಾ ಎಂದರು. ನಿರ್ದೇಶಕ ಗುರುರಾಜ್ ಮಾತನಾಡಿ ಹಾಸ್ಯವನ್ನೇ ಬೇಸ್ ಆಗಿಟ್ಟುಕೊಂಡು ಎಮೋಷನ್ ಹೇಳುವ ಪ್ರಯತ್ನ, ಕಾಮಿಡಿಯ ಜೊತೆಗೆ ಸಂಬಂಧಗಳನ್ನು ಹೇಳಿದ್ದೇವೆ, ನಾಯಕ, ನಾಯಕಿ ಕಾನ್ಸೆಪ್ಟ್ ಬಿಟ್ಟು ಒಂದು ಸಿನಿಮಾ ಅನುಭವ ಹೇಳುವ ಪ್ರಯತ್ನ ಮಾಡಿದ್ದೇವೆ. ಪ್ರತಿಯೊಬ್ಬರೂ ಹರೀಶನ ಲೈಫ್ನಲ್ಲಿ ಯಾವರೀತಿ ಬರ್ತಾರೆಂದು ತೋರಿಸಿದ್ದೇವೆ ಎಂದು ಹೇಳಿದರು.
ಕಥಾನಾಯಕ ಹಗಲುಕನಸು ಕಾಣೋ ಹುಡುಗ. ಉಂಡಾಡಿ ಗುಂಡ. ಹುಡುಗಿಯ ಅನ್ವೇಷಣೆಯಲ್ಲಿರುತ್ತಾನೆ. ಅವನ ಜೀವನದಲ್ಲಿ ನಡೆಯುವ ಕೆಲ ತಿರುವುಗಳನ್ನು ಇಟ್ಟುಕೊಂಡು ಎಲ್ಲಾ ವಯೋಮಾನದ ಪ್ರೇಕ್ಷಕರಿಗಾಗಿ ನಿರ್ಮಿಸಿರುವ ಪಕ್ಕಾ ಕೌಟುಂಬಿಕ ಮನರಂಜನಾತ್ಮಕ ಚಿತ್ರವಿದು. ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಮತ್ತು ಮಂಗಳೂರಿನ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಮಂಗಳೂರು ಕನ್ನಡದ ಕಂಪು ಸಾಥ್ ನೀಡಿದೆ. ಚಿತ್ರದ ನಾಯಕನಾಗಿ ಯೋಗೀಶ್ ಶೆಟ್ಟಿ, ಶ್ವೇತ ಅರಹೊಳೆ, ರೋಹಿಣಿ ಜಗರಾಮ್, ಪ್ರಕಾಶ್, ಸೌಮ್ಯ ಮತ್ತಿತರರು ನಟಿಸಿದ್ದಾರೆ.