ಎಸ್ ಜೆ ಆರ್ ಬ್ಯಾನರಿನಡಿಯಲ್ಲಿ ಶ್ರೀಮತಿ ಜಯಲಕ್ಷ್ಮಿ ರಘು ನಿರ್ಮಿಸಿ , ಯತಿರಾಜ್ ನಿರ್ದೇಶಿಸುತ್ತಿರುವ ` ಮಾಯಾಮೃಗ` ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಇತ್ತೀಚೆಗೆ ನಡೆಯಿತು.
ವಿನು ಮನಸು ಅವರ ಸಂಗೀತ ಸಂಯೋಜನೆಯಲ್ಲಿ, ನಿರ್ದೇಶಕ ಯತಿರಾಜ್ ಅವರು ಬರೆದಿರುವ ಎರಡು ಗೀತೆಗಳಿಗೆ ಗಾಯಕ ವಿಹಾನ್ ಆರ್ಯ ಅವರ ಕಂಠ ಸಿರಿಯಲ್ಲಿ, ರೇಣು ಡಿಜಿ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಲಾಯಿತು.
ಎದೆಯ ಕಿಟಕೀಲಿ ಹೊಂಗಿರಣ ಇಣುಕಿದೆ..ಮುಸುಕಿನ ಗೂಡಿಂದು ರಂಗಾಗಿದೆ..1 ಎಂಬ ಪ್ರೇಮಗೀತೆಯೊಂದಿಗೆ, 1 ನನ್ನವಳೆ...ನನ್ನವಳೆ ನೀ ಎಲ್ಲಿಗೆ ಹೊರಟಿರುವೆ..ನೀನಿರದ ನಾಳೆಯಲಿ ನಾ ಹೇಗೆ ಬಾಳುವೆ..` ಎಂಬ ವಿರಹ ಗೀತೆಗೆ ಸಾಹಿತ್ಯ ಬರೆದಿರುವ ನಿರ್ದೇಶಕ ಯತಿರಾಜ್ ` ಇದೊಂದು ಎಮೋಷನಲ್ ಕಮರ್ಷಿಯಲ್ ಪ್ಯಾಕೇಜ್` ಎನ್ನುತ್ತಾರೆ.
ಏಪ್ರಿಲ್ ಆರರಿಂದ ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ಆರಂಭಿಸಲಿರುವ `ಮಾಯಾಮೃಗ` ಚಿತ್ರದಲ್ಲಿ ಯತಿರಾಜ್ ನಾಯಕ ನಟನಾಗಿ, ಹಾಗೂ ಸೋನು ಸಾಗರ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. `ರಂಗಿತರಂಗ` ಖ್ಯಾತಿಯ ಅರವಿಂದ್ ರಾವ್, ವಿ ಸಿ ಎನ್ ಮಂಜುರಾಜ್, ಗೀತಾ ರಂಗವಲ್ಲಿ, ಯಶೋಧ, ಮಿಥಾಲಿ, ಚಂದನ, ರಂಜಿಕಾ, ಮಂಜುಕುಮಾರ್, ಚೇತನ್, ಸಿರಿ, ಶಶಿ, ರಾಜೇಶ್ ಹಾಗೂ ಮಾ. ಸುಜಿತ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಉಳಿದಂತೆ ಛಾಯಾಗ್ರಹಣ: ವಿದ್ಯಾ ನಾಗೇಶ್, ಸಂಕಲನ: ಯತೀಶ್ ಕುಮಾರ್ , ಸಹ ನಿರ್ದೇಶನ: ಶಶಿಕುಮಾರ್ ಇಜ್ಜಲಘಟ್ಟ, ಸಹಾಯಕ ನಿರ್ದೇಶನ : ಮಂಜುನಾಥ್ ಕೆ ಆರ್, ರಾಜೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ.