ಭಾನುವಾರ ಮುಂಜಾನೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಬ್ಬದ ವಾತಾವರಣವಿತ್ತು. ಎಲ್ಲಿ ನೋಡಿದರೂ ಜನವೋ ಜನ. ಅದಕ್ಕೆ ಕಾರಣವೂ ಇತ್ತು. ಅಲ್ಲಿ ಪೊಗರು ಖ್ಯಾತಿಯ ನಟ ದ್ರುವ ಸರ್ಜಾ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದ ಮುಹೂರ್ತ ಕಾರ್ಯಕ್ರಮ ನಾಡದೇವತೆ ಮೈಸೂರಿನ ಶ್ರೀಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನಡೆಯಿತು. ಭಕ್ತಾದಿಗಳ ಜೊತೆ ಅಭಿಮಾನಿಗಳೂ ಸೇರಿ ಜಾತ್ರೆಯ ವಾತಾವರಣವೇ ಅಲ್ಲಿ ನಿರ್ಮಾಣವಾಗಿತ್ತು. ಹೂವಿನಿಂದ ಅಲಂಕೃತವಾಗಿದ್ದ ಶಕ್ತಿದೇವತೆಯ ರಥವನ್ನು ನಾಯಕ ದ್ರುವಸರ್ಜಾ, ನಿರ್ದೇಶಕ ಪ್ರೇಮ್ ಹಾಗೂ ನಿರ್ಮಾಪಕ ವೆಂಕಟ್ ಕೋನಂಕಿ ಅವರುಗಳು ಎಳೆಯುತ್ತಿರುವ ದೃಶ್ಯವನ್ನು ಚಿತ್ರೀಕರಿಸುವುದರೊಂದಿಗೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು.
ಇದೇ ಮೊದಲ ಬಾರಿಗೆ ಜೊತೆಯಾಗಿರುವ ಇಬ್ಬರು ಸ್ಟಾರ್ಗಳ ಬಿಗ್ ಪ್ರಾಜೆಕ್ಟ್ ಗೆ ನಿಶಾವೆಂಕಟ್ ಕೋನಂಕಿ ಅವರ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಸಂಸ್ಥೆಯ ಪ್ರೊಮೋಟರ್ ಸುಪ್ರೀತ್ ಅವರು ವಹಿಸಿಕೊಂಡಿದ್ದರು. ರೈಡರ್, ಸಖತ್, ಬೈಟು ಲವ್ ನಂತರ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಕನ್ನಡದಲ್ಲಿ ನಿರ್ಮಿಸುತ್ತಿರುವ ನಾಲ್ಕನೇ ಚಿತ್ರವಿದು.
ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರೇಮ್ ಬೆಂಗಳೂರು ಭೂಗತಲೋಕದಲ್ಲಿ ನಡೆದ ಕೆಲವು ರಿಯಲ್ ಇನ್ಸಿಡೆಂಟ್ಗಳನ್ನು ಇಟ್ಟುಕೊಂಡು ಮಾಡುತ್ತಿರುವ ರೌಡಿಸಂ ಹಿನ್ನೆಲೆಯ ಚಿತ್ರವಿದು. 1968 ರಿಂದ 1978 ರವರೆಗಿನ ಸಮಯದಲ್ಲಿ ಬೆಂಗಳೂರಿನಲ್ಲಿ ರೌಡಿಸಂ ಹೇಗಿತ್ತು ಎಂಬುದನ್ನು ರಕ್ತಚರಿತ್ರೆಯೊಂದರ ಮೂಲಕ ಹೇಳಹೊರಟಿದ್ದೇನೆ. ಹಾಗಂತ ಇದು ಬರೀ ರೌಡಿಸಂ ಕಥೆಯಲ್ಲ, ಜೊತೆಗೆ ಲವ್, ಅ್ಯಕ್ಷನ್, ಸೆಂಟಿಮೆಂಟ್ ಎಲ್ಲದರ ಮಿಳಿತವಾಗಿರಲಿದೆ. ಚಿತ್ರದ ನಾಯಕಿ ಪಾತ್ರಕ್ಕೆ ಇನ್ನೂ ಆಯ್ಕೆಯಾಗಿಲ್ಲ, ಎಲ್ಲವನ್ನೂ ಫೈನಲ್ ಮಾಡಿಕೊಂಡು ಮುಂದಿನ ತಿಂಗಳು ಬೆಂಗಳೂರು ಅರಮನೆ ಮುಂಭಾಗದಲ್ಲಿ ಚಿತ್ರದ ಟೈಟಲ್ ನ್ನು ಅದ್ದೂರಿಯಾಗಿ ಅನೌನ್ಸ್ ಮಾಡುವ ಯೋಜನೆಯಿದೆ, ಈ ಚಿತ್ರದಲ್ಲಿ ದ್ರುವ ಅವರ ಲುಕ್, ಗೆಟಪ್ ಎಲ್ಲಾ ಚೇಂಜ್ ಆಗಿರಲಿದೆ ಅಲ್ಲದೆ ಅವರು ಒಳ್ಳೇ ಡಾನ್ಸರ್ ಕೂಡ, ಅದಕ್ಕಾಗೇ ವಿಶೇಷವಾದ ಹಾಡುಗಳನ್ನು ಮಾಡಿಕೊಂಡಿದ್ದೇನೆ ಎಂದು ಹೇಳಿದರು. ನಾಯಕ ದ್ರುವ ಸರ್ಜಾ ಮಾತನಾಡಿ ಪ್ರೇಮ್ ಅವರ ಜೊತೆ ಕೆಲಸ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗ್ತಿದೆ. ಟೈಟಲ್ ಇನ್ನೂ ಫೈನಲ್ ಆಗಿಲ್ಲ, ನಾನೂ ಸಹ ಕಥೆ ಕೇಳಿ ಎಕ್ಸೈಟ್ ಆದೆ, ತುಂಬಾನೇ ಪ್ರಾಮಿಸಿಂಗ್ ಆಗಿದೆ. ಎಪ್ಪತ್ತರ ದಶಕದ ಫ್ಯಾಮಿಲಿ ಲವ್ ಜೊತೆಗೆ ರೌಡಿಸಂ ಕಥೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ ಎಂದು ಹೇಳಿದರು.
ಚಿತ್ರದ ನಿರ್ಮಾಪಕರಾದ ವೆಂಕಟ್ ಕೋನಂಕಿ ಅವರು ಮಾತನಾಡುತ್ತ ಈ ಕಥೆಯೇ ತುಂಬಾ ಚೆನ್ನಾಗಿದೆ, ಎಲ್ಲಾ ಕಡೆಗೂ ಹೊಂದಿಕೊಳ್ಳುವಂಥ ಯೂನಿವರ್ಸಲ್ ಸಬ್ಜೆಕ್ಟ್. ಬಜೆಟ್ ಬಗ್ಗೆ ಯಾವುದೇ ಲಿಮಿಟ್ ಹಾಕಿಕೊಂಡಿಲ್ಲ, ಕಥೆಗೆ ಏನು ಬೇಕೋ ಅದನ್ನೆಲ್ಲ ಕೊಡಲೇಬೇಕು. ಚಿತ್ರದಲ್ಲಿ 70 ರ ದಶಕದ ದೃಶ್ಯಗಳನ್ನು ರೀಕ್ರಿಯೇಟ್ ಮಾಡಬೇಕಿದೆ. ಹಾಗಾಗಿ ಸೆಟ್ಗೇ ಹೆಚ್ಚು ಮಹತ್ವವಿದ್ದು ಹೆಚ್ಚು ಬಂಡವಾಳ ಕೇಳುತ್ತದೆ, ಜೊತೆಗೆ ಪ್ರೇಮ್ ಒಳ್ಳೇ ಹಾಡುಗಳನ್ನು ಮಾಡಿಕೊಂಡಿದ್ದಾರೆ ಎಂದರು.