ಯುವ ಪ್ರತಿಭೆ ಸ್ವಾಮಿ ವೈ.ಬಿ.ಎನ್ ನಟಿಸಿ, ನಿರ್ದೇಶಿಸಿರುವ `ಧೀರನ್` ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಮೂಲಕ ಗಮನ ಸೆಳೆದಿರುವ ಈ ಚಿತ್ರಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ `ಜೋಗಿ`ಪ್ರೇಮ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಸಾಥ್ ನೀಡಿದ್ದಾರೆ.
ಕೆನಡಾದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಸ್ವಾಮಿ, ಸಿನಿಮಾ ನಿರ್ದೇಶಕನಾಗಬೇಕೆಂಬ ಆಶಯದಿಂದ ಕೆಲಸ ತೊರೆದು ಭಾರತಕ್ಕೆ ಬಂದು ನಿರ್ದೇಶಿಸಿದ ಚಿತ್ರ ಧೀರನ್. ಸ್ನೇಹಿತರ ಜೊತೆ ಸೇರಿ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಪರೂ ಆಗಿದ್ದಾರೆ ಸ್ವಾಮಿ. ಉತ್ತರ ಕರ್ನಾಟಕಡೆಲ್ಲೆಡೆ ಪ್ರಚಾರ ಮಾಡಿಕೊಂಡು ಬಂದಿರುವ ಚಿತ್ರತಂಡ ಜನರ ನಡುವೆಯೇ ಹೋಗಿ ಚಿತ್ರದ ಬಗ್ಗೆ ಮಾಹಿತಿ ನೀಡಿ ಕುತೂಹಲ ಹೆಚ್ಚುವಂತೆ ಮಾಡಿರುವುದು `ಧೀರನ್` ಹೆಚ್ಚುಗಾರಿಕೆ.
ಸ್ವಾಮಿಗೆ ನಾಯಕಿಯಾಗಿ ರಕ್ಷಾ ಶೆಟ್ಟಿ ನಟಿಸಿದ್ದಾರೆ. ಅಡ್ಡದಾರಿ ಹಿಡಿಯುತ್ತಿದ್ದ ಹುಡುಗರಿಗೆ ಬುದ್ದಿವಾದ ಹೇಳಿ ಸರಿದಾರಿಗೆ ತರಲು ಪ್ರಯತ್ನಿಸುವ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಪ್ರತಿಯೊಬ್ಬ ಮನುಷ್ಯನಲ್ಲೂ ಮತ್ತೊಬ್ಬ ವ್ಯಕ್ತಿಯಿರುತ್ತಾನೆ. ಆತ ಏನಾದರೂ ಹೊರಗೆ ಬಂದರೆ ಏನಾಗಬಹುದು ಎನ್ನುವುದೇ ಈ ಚಿತ್ರದ ಕಥಾಹಂದರ. ಬೆಂಗಳೂರಿನಿಂದ ಸಕಲೇಶಪುರದವರೆಗೆ ನಡೆಯುವ ಐದು ಪಾತ್ರಗಳ ಕುತೂಹಲಕರ ಪಯಣದಲ್ಲಿ ಯಾರು ಗೆಳೆಯರು, ಯಾರು ವಿಲನ್ ಎಂಬುದೇ ಸಸ್ಪೆನ್ಸ್. ಡ್ರಗ್ಸ್ ಮಾಫಿಯಾದ ಎಳೆ ಕೂಡ ಈ ಚಿತ್ರದಲ್ಲಿದೆ.
ಚಿತ್ರಕಥೆಯನ್ನು ಸ್ವಾಮಿ ಅವರೇ ಬರೆದಿದ್ದಾರೆ. ಮಾಸ್ತಿ ಡೈಲಾಗ್, ಗಣೇಶ ನಾರಾಯಣ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಉಳಿದಂತೆ ತೇಜಸ್ವಿನಿ, ಮಿಮಿಕ್ರಿ ದಯಾನಂದ್ ಮುಂತಾದವರು ತಾರಾಗಣದಲ್ಲಿದ್ದಾರೆ.