Chief Editor
Manohar. R (Manu)
Photo Journalist
chitrataramanu@gmail.com
+91 9845549026
ಡಿಸೆಂಬರ್ 2 ರಂದು `ಧರಣಿ ಮಂಡಲ ಮಧ್ಯದೊಳಗೆ` ಸಿನಿಮಾ ರಾಜ್ಯಾದ್ಯಂತ ಬಿಡುಗಡೆ
Posted date: 23 Wed, Nov 2022 10:08:56 AM
ಭರವಸೆಯ ಟೀಸರ್, ಹಾಡುಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ `ಧರಣಿ ಮಂಡಲ ಮಧ್ಯದೊಳಗೆ` ಸಿನಿಮಾ ಪ್ರೇಕ್ಷಕರೆದುರು ಬರಲು ಡೇಟ್ ಫಿಕ್ಸ್ ಆಗಿದೆ. ಗುಳ್ಟು ಸಿನಿಮಾ ಖ್ಯಾತಿಯ ನವೀನ್ ಶಂಕರ್ ಹಾಗೂ ಐಶಾನಿ ಶೆಟ್ಟಿ ಮುಖ್ಯ ಭೂಮಿಕೆಯ ಈ ಚಿತ್ರ ಡಿಸೆಂಬರ್ 2ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. 

ಟೈಟಲ್ ಮೂಲಕವೇ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ `ಧರಣಿ ಮಂಡಲ ಮಧ್ಯದೊಳಗೆ` ಸಿನಿಮಾ ಶ್ರೀಧರ್ ಶಿಕಾರಿಪುರ ಅವರ ಮೊದಲ ಸಿನಿಮಾ ಕನಸು. ಈ ಚಿತ್ರದ ಮೂಲಕ ಶ್ರೀಧರ್ ಶಿಕಾರಿಪುರ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಅವರೊಂದಿಗೆ ನಿರ್ದೇಶನ ವಿಭಾಗದಲ್ಲಿ ದುಡಿದ ಅನುಭವ ಶ್ರೀಧರ್ ಅವರಿಗಿದೆ. ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ ಕಥಾಹಂದರ ಒಳಗೊಂಡ ಈ ಸಿನಿಮಾ ಪ್ರೇಕ್ಷಕರಿಗೆ ಥ್ರಿಲ್ ನೀಡುವುದರ ಜೊತೆಗೆ ಪ್ರೀತಿ, ಸೆಂಟಿಮೆಂಟ್ ಎಳೆಗಳನ್ನು ಉಣಬಡಿಸಲಿದೆ.

ಬಾಕ್ಸಿಂಗ್ ನಲ್ಲಿ ಆಸಕ್ತಿ ಇರುವ ಹುಡುಗನ ಸುತ್ತ ಹೆಣೆಯಲಾದ ಕಥೆ ಚಿತ್ರದಲ್ಲಿದೆ. ಬಾಕ್ಸಿಂಗ್ ಕನಸಿನ ಬೆನ್ನತ್ತಿದ ಹುಡುಗನ ಜೀವನದಲ್ಲಿ ನಡೆಯುವ ಘಟನೆ ಬದುಕಿಗೆ ಯಾವೆಲ್ಲ ತಿರುವು ನೀಡುತ್ತೆ ಅನ್ನೋದು ಚಿತ್ರದ ಒನ್ ಲೈನ್ ಕಹಾನಿ. ಚಿತ್ರದಲ್ಲಿ ಗುಳ್ಟು ಖ್ಯಾತಿಯ ನವೀನ್ ಶಂಕರ್, ಐಶಾನಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಒಳಗೊಂಡ ತಾರಾಗಣವಿದೆ. 

ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಒಂಕಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ವೀರೇಂದ್ರ ಕಾಂಚನ್, ಗೌತಮಿ ರೆಡ್ಡಿ ಸಹ ನಿರ್ಮಾಣವಿದೆ. ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ. ವಿಜಯ್ ಪ್ರಕಾಶ್, ಶರಣ್ ಹಾಡಿರುವ ಹಾಡುಗಳು ಸೂಪರ್ ಹಿಟ್ ಆಗಿದ್ದು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ಡಿಸೆಂಬರ್ 2ರಂದು ಪ್ರೇಕ್ಷಕರ ಮನಗೆಲ್ಲಲು ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.
 

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಡಿಸೆಂಬರ್ 2 ರಂದು `ಧರಣಿ ಮಂಡಲ ಮಧ್ಯದೊಳಗೆ` ಸಿನಿಮಾ ರಾಜ್ಯಾದ್ಯಂತ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.