ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಜೀವನದಲ್ಲಿ ಅನೇಕ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಕೆಲ ಪರಿಸ್ಥಿತಿಗಳನ್ನು ನಿಭಾಯಿಸಲು ಆ ವ್ಯಕ್ತಿ ಅಥವಾ ಆತನ ಸುತ್ತಲೂ ಇರುವ ಜನ ತೆಗೆದುಕೊಳ್ಳುವ ನಿರ್ಧಾರಗಳು ಆತನ ಜೀವನದ ದಿಕ್ಕನ್ನೇ ಬದಲಾಯಿಸಬಹುದು. ಅದು ಒಳ್ಳೆಯದು ಅಥವಾ ಕೆಟ್ಟದ್ದೂ ಆಗಿರಬಹುದು. ಅದೇರೀತಿ ರಸ್ತೆಯಲ್ಲಿ ಚಿತ್ರಬಿಡಿಸುತ್ತ ಜೀವನ ಸಾಗಿಸುವ ಕಲಾವಿದನೊಬ್ಬನ ಜೀವನದಲ್ಲಿ ಎದುರಾದ ಪರಿಸ್ಥಿತಿಯನ್ನು ಹೇಳುವ ಚಿತ್ರವೇ ಪರಿಸ್ಥಿತಿ. ಕಲಾಸಿಪಾಳ್ಯ, ಹಾರ್ಟ್ ಬೀಟ್ ನಂಥ ಹಿಟ್ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಆರ್.ಎಸ್. ಗಣೇಶ್ ನಾರಾಯಣ್ ಈ ಚಿತ್ರದ ಮೂಲಕ ನಿರ್ದೇಶಕನಾಗಿದ್ದಾರೆ. ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಎಂಎಂಬಿ ಲೆಗೆಸಿ ಹಾಲ್ ನಲ್ಲಿ ನೆರವೇರಿತು. ಈ ಚಿತ್ರವನ್ನು ಶಿವಾನಿ ಫಿಲಂಸ್ ಮೂಲಕ ಎಂ.ಸಿ.ಎಂ.ಆರಾಧ್ಯ ಅವರು ನಿರ್ಮಿಸಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಅರಸ್, ನಿರ್ಮಾಪಕ ಭಾಸ್ಕರ ನಾಯ್ಕ, ನವರಸನ್, ಶ್ರೀ ಹಾಜರಿದ್ದು ತಂಡಕ್ಕೆ ಶುಭ ಹಾರೈಸಿದರು. ಗಣೇಶ್ ನನ್ನ ಕ್ಲಾಸ್ ಮೆಟ್, ಇವರು ಯಾವಾಗಲೋ ಸಿನಿಮಾ ಮಾಡಬೇಕಿತ್ತು. ೩ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು. ಈಗ ಒಂದೊಳ್ಳೆ ಸಿನಿಮಾ ಮೂಲಕ ಹೊಸಹೆಜ್ಜೆ ಇಟ್ಟಿದ್ದಾರೆ, ಒಳ್ಳೇದಾಗಲಿ ಎಂದು ಶುಭ ಹಾರೈಸಿದರು.
ನಿರ್ಮಾಪಕ ಆರಾಧ್ಯ ಮಾತನಾಡಿ ನಾನು ಗಣೇಶ್ ಬಹಳ ದಿನಗಳ ಸ್ನೇಹಿತರು. ಒಮ್ಮೆ ಹೀಗೇ ಮಾತಾಡುವಾಗ ಗಣೇಶ್, ಒಂದು ಷಾರ್ಟ್ ಫಿಲಂ ಮಾಡೋಣ ಎಂದು ಹೇಳಿದರು. ನಂತರ ಅದು ಸಿನಿಮಾನೇ ಆಯಿತು. ಲೋ ಬಜೆಟ್ ಮೂವೀ ಆದರೂ ಸಿನಿಮಾ ರಿಚ್ ಆಗಿ ಬಂದಿದೆ. ರಮಣಿ, ತಂಗಾಳಿ ನಾಗರಾಜ್, ಅಜಿತ್ ಮೂರು ಜನರನ್ನು ಕೋವಿಡ್ ನಲ್ಲಿ ಕಳೆದುಕೊಂಡೆವು. ನಮಗೆ ಮಧು, ಮುರಳಿ (ಯುಎಸ್) ನಿರ್ಮಾಣದಲ್ಲಿ ಸಪೋರ್ಟ್ ಮಾಡಿದ್ದಾರೆ ಎಂದು ಹೇಳಿದರು. ಚಿತ್ರ ಬಿಡಿಸುವ ಕಲಾವಿದನಾಗಿ ಗಣೇಶ್ ನಾರಾಯಣ್ ಅವರೇ ಅಭಿನಯಿಸಿದ್ದು, ನಮ್ರತಾ, ಅಜಿತ್ ಕುಮಾರ್, ಸಾಯಿಕೃಷ್ಣರೆಡ್ಡಿ, ತಂಗಾಳಿ ನಾಗರಾಜ್, ಶಿಲ್ಪಾ, ಜೋತಿರಾಜನ್ ಅಭಿನಯಿಸಿದ್ದಾರೆ. ಗಣೇಶ್ ಅವರೇ ಚಿತ್ರದ ಸಂಗೀತ ನಿರ್ದೇಶಕರಾಗಿದ್ದು, ಗೌತಮ್ ಮನು ಕ್ಯಾಮೆರಾ ವರ್ಕ್ ಮಾಡಿದ್ದಾರೆ.