"ಪರಂವಃ" ಶಿವನ ಡಮರುಗದಿಂದ ಪ್ರಥಮ ಬಾರಿಗೆ ಹೊರಬರುವ ಶಬ್ದ. ಈಗ ಇದೇ ಶೀರ್ಷಿಕೆ ಇಟ್ಟುಕೊಂಡು ಚಲನಚಿತ್ರವೊಂದು ನಿರ್ಮಾಣವಾಗಿದೆ. ಸಂತೋಷ್ ಕೈದಾಳ ಕಥೆ, ಚಿತ್ರ ಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ವೀರಗಾಸೆ ಕುಟುಂಬದಿಂದ ಬಂದ ಹುಡುಗನೊಬ್ಬನ ಜೀವನದ ಕಥೆಯಿದೆ. ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದ ಪ್ರೇಮ್ ಸಿಡೇಗಲ್ ಈ ಚಿತ್ರದ ಮೂಲಕ ನಾಯಕನಾಗಿದ್ದಾರೆ. ಮೈತ್ರಿ ಚಿತ್ರದ ನಾಯಕಿ. ಇತ್ತೀಚಿಗೆ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ ಪೂರ್ಣ ಚಂದ್ರ ತೇಜಸ್ವಿ ಮಾತನಾಡಿ, ಈ ತಂಡ ಮಾಡಿಕೊಂಡ ಕಂಟೆಂಟ್ ನಲ್ಲೇ ಹೊಸತನವಿದೆ. ಕಾಂತಾರದಂಥ ಕಾನ್ಸೆಪ್ಟ್ ತಂದು ನನ್ನಬಳಿ ಕೊಟ್ಟಾಗ ಖುಷಿಯಾಗಿ ಬಿಜಿಎಂ ಮಾಡಿದೆ. ಕಾಲೇಜ್ ಎಪಿಸೋಡನ್ನು ಸ್ವಲ್ಪ `ರಾ` ಆಗಿ ತೋರಿಸಿದ್ದಾರೆ ಎಂದರೆ, ಅತಿಥಿಯಾಗಿ ಆಗಮಿಸಿದ್ದ ಮಾಸ್ತಿ ಮಾತನಾಡಿ ಇಲ್ಲಿ ವೀರಗಾಸೆ ಕಲೆಯ ಬಗ್ಗೆ ಹೇಳಿದ್ದಾರೆ. ಇಡೀ ಚಿತ್ರದಲ್ಲಿ ಒಂದು ಸೌಂಡ್ ಇದೆ ಎಂದರು.
ನಿರ್ದೇಶಕ ಸಂತೋಷ್ ಕೈದಾಳ ತನ್ನ ಜರ್ನಿ ಮತ್ತು ಚಿತ್ರದ ಕುರಿತಂತೆ ಮಾತನಾಡುತ್ತ, ನಾನು ತುಮಕೂರು ಬಳಿಯ ಹಳ್ಳಿಯಿಂದ ಬಂದವನು. ಡಿಗ್ರಿ ಮುಗಿಸಿದ ನಂತರ ಇಂಡಸ್ಟ್ರಿಗೆ ಬಂದು ಶಿವಣ್ಣ ಅಭಿನಯದ ಆರ್ಯನ್, ನಂತರ ಗುರು ದೇಶಪಾಂಡೆ ಅವರಜೊತೆ ರುದ್ರತಾಂಡವ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ವರ್ಕ್ ಮಾಡಿದೆ. ಅಲ್ಲಿ ಪ್ರೇಮ್ ಕೂಡ ಅಸೋಸಿಯೇಟ್ ಆಗಿದ್ದರು. ಅಲ್ಲಿಂದ ಶುರುವಾದ ಸ್ನೇಹ ಪರಂವಃ ವರೆಗೂ ಬಂದಿದೆ. ಚಿತ್ರದ ಬಗ್ಗೆ ಹೇಳುವುದಾದರೆ, ನಾಯಕ ವೀರಗಾಸೆ ಕುಟುಂಬದ ಒಬ್ಬ ಸಾಧಾರಣ ಹುಡುಗ, ಆತನ ತಂದೆ ಅಂಗವಿಕಲ, ನಿನ್ನಿಂದ ನಮ್ಮ ವಂಶದ ವೀರಗಾಸೆ ಮುಂದುವರೆಯಬೇಕು ಎಂದು ಮಗನಿಗೆ ಹೇಳಿರುತ್ತಾನೆ.
ನಂತರ ನಾಯಕನ ಕಾಲೇಜ್, ಲವ್ ಎಪಿಸೋಡ್ ಬರುತ್ತದೆ, ಈ ಹಂತದಲ್ಲಿ ಮಗನಿಂದ ತಂದೆಯ ಆಸೆ ಪೂರೈಸಲು ಸಾಧ್ಯವಾಗುತ್ತಾ, ಇಲ್ವಾ, ಮೈಸೂರು ದಸರಾದಲ್ಲಿ ಆತ ವೀರಗಾಸೆ ಹೇಳ್ತಾನಾ ಎನ್ನೋದೇ ಚಿತ್ರದ ಕಥೆ. ನಾವು ಚಿತ್ರ ಮಾಡಬೇಕೆಂದು ಹೊರಟಾಗ ಯಾರ ಸಪೋರ್ಟ್ ಸಿಗಲಿಲ್ಲ, ಕೊನೆಗೆ ನಮ್ಮ ಸ್ನೇಹಿತರೆಲ್ಲ ಸೇರಿ 200 ಜನ ಚಿತ್ರಕ್ಕೆ ಬಂಡವಾಳ ಹಾಕಿದರು. ಚಿಕ್ಕ ಬಜೆಟ್ ಸಿನಿಮಾ, ತಂದೆ ಪಾತ್ರವನ್ನು ಗಣೇಶ್ ಮಾಸ್ಟರ್ ಮಾಡಿದ್ದಾರೆ. ನಾಯಕಿ ಮೈತ್ರಿ ಮಂಗಳೂರು ಹುಡುಗಿ, ಅಪರಾಜಿತ್, ಜೋಸ್ ಜೊಸ್ವೆ ಮ್ಯೂಸಿಕ್ ಮಾಡಿದ್ದಾರೆ.ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದರು.
ಈ ಚಿತ್ರವನ್ನು ರಿಲೀಸ್ ಮಾಡುವ ಜವಾಬ್ದಾರಿ ಹೊತ್ತಿರುವ ಗುರು ದೇಶಪಾಂಡೆ ಮಾತನಾಡುತ್ತ ಹೊಸ ಹುಡುಗರು ಹೊಸದಾಗಿ ಟ್ರೈ ಮಾಡಿದ್ದಾರೆ. ನನ್ನ ಜೊತೆ ಕೆಲಸ ಮಾಡಿದ ಎಲ್ಲರಿಗೂ ನಾನು ಸಪೋರ್ಟ್ ಮಾಡುತ್ತ ಬಂದಿದ್ದೇನೆ. ಪ್ರೇಮ್, ಸಂತೋಷ್ ತುಂಬಾ ಹಾನೆಸ್ಟಾಗಿ ಈ ಸಿನಿಮಾ ಮಾಡಿದ್ದಾರೆ, ಅವರಲ್ಲಿ ತುಡಿತವಿದೆ, ನಾನೂಜನ ಸಿನಿಮಾನ ನೋಡಿದ್ದೇನೆ, ಚನ್ನಾಗಿ ಬಂದಿದೆ ಎಂದರು.