ಬೆಂಗಳೂರಿನ ನಾರಾಯಣ ನೇತ್ರಾಲಯದ ಮುಖ್ಯಸ್ಥರೂ ಆಗಿದ್ದ ಖ್ಯಾತ ನೇತ್ರ ತಜ್ಞ ಡಾ ಕೆ ಭುಜಂಗಶೆಟ್ಟಿ ನಿಧನ ಹೊಂದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು
ಎಂದಿನಂತೆ ಶುಕ್ರವಾರ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ನೀಡಿದ್ದ ಡಾ.ಭುಜಂಗ ಶೆಟ್ಟಿ ಅವರಿಗೆ ಸಂಜೆ 6 ಗಂಟೆ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿದೆ.
ಆನಂತರ ಆಸ್ಪತ್ರೆಯಿಂದ ಮನೆಗೆ ವಾಪಸಾದ ಬಳಿಕ ಹೃದಯಾಘಾತವಾಗಿದ್ದು, ಕೂಡಲೇ ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಡಾ.ಕೆ.ಭುಜಂಗಶೆಟ್ಟಿ ಅವರು, ಬೆಂಗಳೂರು ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, 1978ರಲ್ಲಿ ಎಂಬಿಬಿಎಸ್ ಮಾಡಿದರು. ಅವರು 1982ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ನೇತ್ರ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರ ರೆಸಿಡೆನ್ಸಿ ಮಾಡಿದರು. ಎಂಬತ್ತರ ದಶಕದಲ್ಲಿ ಒಂದು ಸಣ್ಣ ಚಿಕಿತ್ಸಾಲಯದಲ್ಲಿ ನೇತ್ರಶಾಸ್ತ್ರ ಅಭ್ಯಾಸ ಪ್ರಾರಂಭಿಸಿದರು.ಬಳಿಕ ನಾರಾಯಣ ನೇತ್ರಾಲಯದಲ್ಲಿ ವಿವಿಧ ಉಪ ವಿಶೇಷತೆಗಳ ಅಭಿವೃದ್ಧಿಗೆ ಅವರು ಸಕ್ರಿಯವಾಗಿ ಪ್ರೋತ್ಸಾಹಿಸಿದ್ದಾರೆ.