Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಾಮಾಜಿಕ ಚಿತ್ರಗಳ ಮೂಲಕ ಹೆಸರಾಗಿರುವ ಮಾಧವಾನಂದ ಯೋಗಪ್ಪ ಶೇಗುಣಸಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ ಮತ್ತೊಂದು ಸದಭಿರುಚಿಯ ಚಿತ್ರ
Posted date: 22 Mon, May 2023 05:06:27 PM
ಕನ್ನಡ ಚಿತ್ರರಂಗದ ಮೂಲಕ ಜ್ಯಾತ್ಯಾತೀತ ಸಮಾಜ ನಿರ್ಮಾಣದಲ್ಲಿ ತಮ್ಮದೇ ಆದ ಹೆಜ್ಜೆಯಿಡುತ್ತಿರುವವರು ಮಾಧವಾನಂದ ಯೋಗಪ್ಪ ಶೇಗುಣಸಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳದವರು.
 
ಇಂಚಗೇರಿ ಸಂಪ್ರದಾಯ ದೇಶದ ಜ್ಯಾತ್ಯಾತೀತ ಮಠ ಅಲ್ಲದೇ 12ನೇ ಶತಮಾನದ ಶರಣರ ಸಮಾನತೆಯ ಸಮಾಜ ಕಟ್ಟುವ ಎಲ್ಲಾ ಕೆಲಸಗಳನ್ನು ಕಾರ್ಯರೂಪದಲ್ಲಿ ನಡೆಸಿಕೊಂಡು ಬಂದಿರುವುದು. ಇಂತಹ ಇಂಚಗೇರಿ ಪರಂಪರೆಯಲ್ಲಿ ಬೆಳೆದ ತೇರದಾಳದ ಮಾಧವಾನಂದರವರು ಇಂದಿನ ಸಮಾಜಕ್ಕೆ ಶರಣರ ಹಾಗೂ ಈ ಪರಂಪರೆಯ ಮತ್ತಷ್ಟು ವಿಷಯಗಳನ್ನು ಹಿರಿಯರಿಗೆ, ಯುವಪೀಳಿಗೆಗೆ ಬೆಳ್ಳಿಪರದೆಯ ಮೇಲೆ ತೋರಿಸಿ, ನೆನಪಿಸುವುದರೊಂದಿಗೆ,  ಪ್ರಭಾವಕಾರಿ ಮಧ್ಯಮವಾದ ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪನ್ನು ಕನ್ನಡ ಚಿತ್ರರಂಗದಲ್ಲಿ ಮೂಡಿಸುತ್ತಿರುವುದು ವಿಶೇಷ. ಇಂದಿನ ನೂರಾರು ಕಮರ್ಷಿಯಲ್ ಕನ್ನಡ ಚಲನಚಿತ್ರಗಳ ಸೋಲು-ಗೆಲುವುಗಳ ಮಧ್ಯೆಯೂ ತಮ್ಮದೇ ಆದ ಸಿದ್ಧಾಂತ ಹಾಗು ಸಮಾಜಕ್ಕೆ ಶರಣರ ಕೊಡುಗೆಗಳನ್ನು ಧೈರ್ಯದಿಂದ ನಿರ್ಮಾಣ ಮಾಡುವುದರ ಜೊತೆಗೆ ಕಥೆ ಸಂಭಾಷಣೆ ತಾವೇ ಕಾಳಜಿವಹಿಸಿ ಪ್ರೇಕ್ಷಕರಿಗೆ ಅರ್ಪಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ, ಮಹಾಮಾನವತಾವಾದಿ ಇಂಚಗೇರಿ ಪರಂಪರೆಯ  ಶ್ರೀ ಸದ್ಗುರು ಮಾಧವಾನಂದ ಪ್ರಭುಜಿಯವರ ಜೀವನಾಧಾರಿತ "ಕ್ರಾಂತಿಯೋಗಿ ಮಹಾದೇವರು " ಚಲನಚಿತ್ರ 2018ರಲ್ಲಿ ಖ್ಯಾತ ನಿರ್ದೇಶಕ ಓಂ ಸಾಯಿಪ್ರಕಾಶ್ ರವರ ನಿರ್ದೇಶನ ಹಾಗು ನಟ ರಾಮಕುಮಾರ ರವರ ಮುಖ್ಯ ಪಾತ್ರದಲ್ಲಿ ಮೂಡಿಬಂದಿತ್ತು. ಈ ಚಿತ್ರವು ಉತ್ತರ ಕರ್ನಾಟಕ ಭಾಗದ ಅನೇಕ ಚಿತ್ರಮಂದಿರಗಳಲ್ಲಿ 25ದಿವಸ ತುಂಬು ಪ್ರದರ್ಶನವಾಗಿ ಗುರು-ಹಿರಿಯರ ಹಾಗು ಯುವ ಸಮುದಾಯ ಸೇರಿದಂತೆ ಎಲ್ಲರ ಮೆಚ್ಚುಗೆಗಳಿಸಿತ್ತು.
 
ಚಿತ್ರಮಂದಿರಗಳ ಕಡೇ ಸುಮಾರು ವರ್ಷದಿಂದ ಬರದವರು ಕೂಡಾ ಈ ಚಿತ್ರವನ್ನು ಬಂದು ನೋಡಿ ಪ್ರಶಂಸಿಸಿದ್ದರು. ನಂತರದಲ್ಲಿ ಹಲವು ವರ್ಷಗಳ ಪರಿಶ್ರಮದಿಂದ 12ನೇ ಶತಮಾನದ ಅನುಭವ ಮಂಟಪದ ಶೂನ್ಯಸಿಂಹಸಾನಾಧಿಶ್ವರ ಶ್ರೀ ಅಲ್ಲಮಪ್ರಭುದೇವರ ಜೀವನಾಧಾರಿತ ವ್ಯೋಮಕಾಯ ಸಿದ್ಧ "ಶ್ರೀ ಅಲ್ಲಮಪ್ರಭು" ಚಲನಚಿತ್ರವನ್ನು 2022ರಲ್ಲಿ ಅದ್ದೂರಿಯಾಗಿ ನಿರ್ಮಾಣ ಮಾಡಿ ಸ್ವಾಮೀಜಿಗಳ, ಸಾಹಿತಿಗಳ ಹಾಗು ಜನಮನ ಮುಟ್ಟಿ ಭೇಷ್ ಅನ್ನುವ ಹಾಗೆ ಮಾಡಿದರು. ಇಂದಿನ ಬೇರೆಯೇ ಟ್ರೆಂಡ್ ಇರುವ ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಜ್ಯಾತ್ಯಾತೀತ ಹಾಗು ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಇವರು ಇಡುತ್ತಿರುವ ಹೆಜ್ಜೆ ಹಾಗು ಧೈರ್ಯಕ್ಕೆ ಮೆಚ್ಚಬೇಕು. ಈಗ ತಿಳಿದುಬಂದಿರುವ ವಿಷಯದ ಪ್ರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೊಡ್ಡ ಸಾಹಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ. ಈ ಹಿಂದೆ ಚಲನಚಿತ್ರಗಳನ್ನು ನಿರ್ಮಾಣ ಮಾಡುವ ಸಂದರ್ಭಗಳಲ್ಲಿ ಅನೇಕ ಪಾಠಗಳನ್ನು ಕಲಿತ ಇವರು ಈ ಭಾರಿ ದೊಡ್ಡಮಟ್ಟದಲ್ಲೆ ತಯಾರಿಯಾಗಿ, ಅನೇಕ ಹೊಸ ಪ್ರತಿಭೆ ಹಾಗು ದೊಡ್ಡ ತಂಡವನ್ನೆ ಕಟ್ಟಿಕೊಂಡು ದೊಡ್ಡ ಹೆಜ್ಜೆ ಇಡುತ್ತಿರುವುದು ಸುದ್ದಿ. ಈ ಬಾರಿ ಸಮಾಜದಲ್ಲಿನ ಧರ್ಮದ ಕುರಿತು ಅತೀ ಸೂಕ್ಷ್ಮ ವಿಷಯವನ್ನು ಕೈಗೆತ್ತಿ ಕೊಂಡಿರುವುದು ಕುತೂಹಲಕಾರಿ ವಿಷಯ. ಎಲ್ಲಕ್ಕೂ ಸದ್ಯದಲ್ಲೇ ಹೊಸ ಯೋಜನೆ ಕುರಿತು ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದು ನಿರ್ಮಾಪಕ ಕಥೆ-ಸಂಭಾಷಣೆಗಾರ ಮಾಧವಾನಂದ ತಿಳಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಾಮಾಜಿಕ ಚಿತ್ರಗಳ ಮೂಲಕ ಹೆಸರಾಗಿರುವ ಮಾಧವಾನಂದ ಯೋಗಪ್ಪ ಶೇಗುಣಸಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ ಮತ್ತೊಂದು ಸದಭಿರುಚಿಯ ಚಿತ್ರ - Chitratara.com
Copyright 2009 chitratara.com Reproduction is forbidden unless authorized. All rights reserved.