"ಎಲ್ಲಿ ಹೆಣ್ಣು ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ವಾಸಿಸುತ್ತಾರೆ" ವಿಲನ್ ಗಳನ್ನುದ್ದೇಶಿಸಿ ನಾಯಕ ಮೇಲಿನ ಮಾತನ್ನು ಹೇಳುತ್ತಾನೆ. ಈವಾರ ತೆರೆಕಂಡ ಲವ್ ಲೀ.. ಚಿತ್ರದ ದೃಶ್ಯವಿದು. ಭಾವನೆಗಳೇ ಇಲ್ಲದೆ, ಬೆಳೆದ ಅನಾಥ ಯುವಕನ ಜೀವನದಲ್ಲಿ ಯುವತಿಯೊಬ್ಬಳ ಆಗಮನವಾದ ಮೇಲೆ ಆತನ ಲೈಫ್ ಹೇಗೆ ಚೇಂಜ್ ಆಯ್ತು, ಆ ಬದಲಾದ ಜೀವನದಲ್ಲಿ ಆತ ಏನೆಲ್ಲ ಹೋರಾಟ ಮಾಡಿದ ಎಂದು ಲವ್ ಲೀ.. ಚಿತ್ರದ ಮೂಲಕ ನಿರ್ದೇಶಕ ಚೇತನ್ ಕೇಶವ್ ಹೇಳಿದ್ದಾರೆ. ಹೆತ್ತವರ ನಿರ್ಲಕ್ಷ್ಯಕ್ಕೊಳಗಾಗಿ ಅನಾಥ ಹುಡುಗನಾಗಿ ಬೆಳೆದ ಜಯ್(ವಸಿಷ್ಠ ಎನ್. ಸಿಂಹ)ಗೆ ಭಾವನೆ, ಪ್ರೀತಿ, ಪ್ರೇಮ ಅಂದ್ರೇನು ಅಂತ ಗೊತ್ತಿರಲ್ಲ, ಇಂಥವನ ಬಾಳಲ್ಲಿ ಪ್ರೀತಿ, ಪ್ರೇಮದ ಸಿಂಚನ ಸುರಿಸಿದವಳು ಜನನಿ (ಸ್ಟೆಫಿ ಪಟೇಲ್). ಹೊಡೆದಾಟವೇ ಇದೇ ಜೀವನ ಅಂದುಕೊಂಡಿದ್ದ ಜಯ್ ಒಳಗಿದ್ದ ಮತ್ತೊಬ್ಬ ಸಾಫ್ಟ್ ವ್ಯಕ್ತಿಯನ್ನು ಈಕೆ ಗುರುತಿಸುತ್ತಾಳೆ, ಮೊದ ಮೊದಲು ಜನನಿಯ ಸ್ನೇಹ, ಪ್ರೀತಿಯನ್ನು ತಿರಸ್ಕರಿಸುವ ಜಯ್, ಕ್ರಮೇಣ ಆಕೆಯ ಪ್ರೀತಿಯನ್ನು ಸ್ವೀಕರಿಸುತ್ತಾನೆ. ತನ್ನನ್ನು ನಂಬಿ ಹೆತ್ತ ತಂದೆ-ತಾಯಿಯನ್ನೇ ದೂರ ಮಾಡಿ ಬಂದಿರುವ ಜನನಿಯನ್ನು ಜಯ್ ಸ್ವೀಕರಿಸಿ ಹೂವಿನಂತೆ ನೋಡಿಕೊಳ್ಳುತ್ತಾನೆ. ತಾನೊಬ್ಬ ಅನಾಥನೆಂದು ಗೊತ್ತಿದ್ದರೂ ಜನನಿ ತನ್ನ ಮೇಲಿಟ್ಟಿರುವ ಅಚಲವಾದ ವಿಶ್ವಾಸ ಪ್ರೀತಿಯನ್ನು ಉಳಿಸಿಕೊಳ್ಳಲು ಯಾವ ರೀತಿ ಹೋರಾಡುತ್ತಾನೆ ಎನ್ನುವುದೇ ಲವ್ ಲೀ ಚಿತ್ರದ ಕಾನ್ಸೆಪ್ಟ್. ಅವರಿಬ್ಬರೂ ಪ್ರೀತಿಸಿ ಮದುವೆಯಾಗಿ ಮಂಗಳೂರಿಗೆ ಬಂದು ಹೊಸ ಮನೆಯಲ್ಲಿ ತಮ್ಮದೇ ಆದ ಪುಟ್ಟ ಸಂಸಾರ ಹೂಡುತ್ತಾರೆ. ಜಯ್ ಕೆಲಸಕ್ಕೆ ಸೇರುತ್ತಾನೆ. ಹೀಗೇ ಸತಿ ಪತಿ ಇಬ್ಬರೂ ಖುಷಿಯಾಗಿ ಜೀವನ ನಡೆಸುವಾಗ ಮುದ್ದಾದ ಹೆಣ್ಣು ಮಗುವೊಂದು ಇವರ ಬಾಳಲ್ಲಿ ಬೆಳಕಾಗಿ ಬರುತ್ತದೆ, ಐದು ವರ್ಷ ಯಾವುದೇ ಆತಂಕವಿಲ್ಲದೆ ಸಾಗಿದ ಇವರ ಜೀವನದಲ್ಲಿ ಆಘಾತವೊಂದು ನಡೆಯುತ್ತದೆ. ಒಮ್ಮೆ ಜನನಿ ಸಮುದ್ರ ತೀರದಲ್ಲಿ ಇದ್ದಕ್ಕಿದ್ದ ಹಾಗೆ ತಲೆಸುತ್ತು ಬಂದು ಬೀಳುತ್ತಾಳೆ. ತಕ್ಷಣ ಜಯ್ ಆಕೆಯನ್ನು ಆಸ್ಪತ್ರೆಗೆ ಸೇರಿಸುತ್ತಾನೆ. ಆಕೆಯನ್ನು ಪರೀಕ್ಷೆ ಮಾಡಿದ ಡಾ.ಶಶಿಕಲಾ(ಮಾಳವಿಕಾ ಅವಿನಾಶ್) ಬ್ಲಡ್ ರಿಪೋರ್ಟ್ ಬಂದಮೇಲೆ, ಅದರಲ್ಲಿದ್ದ ಆಘಾತಕಾರಿ ವಿಷಯವೊಂದನ್ನು ಜಯ್ಗೆ ತಿಳಿಸುತ್ತಾರೆ. ಜನನಿಯ ಬ್ಲಡ್ ರಿಪೋರ್ಟ್ ನೋಡಿದ ಜಯ್ ಅಲ್ಲೇ ಕುಸಿದು ಬೀಳುತ್ತಾನೆ. ಯಾಕೆಂದರೆ ಯಾರೂ ಊಹಿಸದ ಖಾಯಿಲೆಯೊಂದು ಜನನಿಯನ್ನು ಆವರಿಸಿಕೊಂಡಿರುತ್ತದೆ. ಆನಂತರ ಜನನಿಯನ್ನು ಉಳಿಸಿಕೊಳ್ಳಲು ಜಯ್ ಹೇಗೆಲ್ಲ ಹೋರಾಡುತ್ತಾನೆ, ಆಕೆಗೆ ಬಂದಂಥ ಖಾಯಿಲೆಯಾದರೂ ಯಾವುದು ಎಂದು ತಿಳಿಯಲು ಥೇಟರಿಗೆ ಹೋಗಿ ಒಮ್ಮೆ ಲವ್ಲೀ.. ಚಿತ್ರವನ್ನು ವೀಕ್ಷಿಸಬೇಕು.
ಇದುವರೆಗೆ ರಗಡ್ ಪಾತ್ರಗಳನ್ನೇ ಮಾಡಿಕೊಂಡು ಬಂದಿರುವ ನಟ ವಸಿಷ್ಠ ಸಿಂಹ ಈ ಚಿತ್ರದಲ್ಲಿ ರಗಡ್ ಯುವಕ ಹಾಗೂ ಜವಬ್ದಾರಿಯುತ ಪತಿಯಾಗಿ ಎರಡು ಶೇಡ್ ಇರೋ ಕ್ಯಾರೆಕ್ಟರ್ ನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದಾರೆ. ಜನನಿಯ ಪಾತ್ರದಲ್ಲಿ ನಾಯಕಿ ಸ್ಟೆಫಿ ಪಟೇಲ್ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ತೆರೆಮೇಲೂ ಅವರು ಅಷ್ಟೇ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಾಯಕಿ ಸಮೀಕ್ಷಾ, ಹೀರೋ ಕೆಲಸ ಮಾಡುವ ಆಫೀಸ್ನಲ್ಲೇ ವರ್ಕ್ ಮಾಡುವ ಅನು ಪಾತ್ರವನ್ನು ನಿಭಾಯಿಸಿದ್ದಾರೆ. ಗಂಭೀರವಾಗಿ ಸಾಗೋ ಕಥೆಯ ನಡುವೆ ಸಾಧು ಕೋಕಿಲ ಅವರ ಕಾಮಿಡಿ ಸಿಂಚನ ಮಜಾ ಕೊಡುತ್ತದೆ. ನಾಯಕನ ಮಗಳಾಗಿ ಚಟಪಟ ಮಾತಾಡುವ ವಂಶಿಕಾ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಹಿರಿಯನಟ ದತ್ತಣ್ಣ ನಾಯಕನ ನೈಬರ್ ಆಗಿ ಗಮನ ಸೆಳೆಯುತ್ತಾರೆ. ಮುಖ್ಯವಾಗಿ ಡಾಕ್ಟರ್ ಪಾತ್ರ ನಿರ್ವಹಿಸಿರುವ ಮಾಳವಿಕಾ ಅವಿನಾಶ್ ಅವರು ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗುತ್ತಾರೆ. ನಾಯಕಿಯ ತಂದೆಯಾಗಿ ಅಚ್ಯುತ್ಕುಮಾರ್ ಹೆಣ್ಣಿನ ಜವಾಬ್ದಾರಿಯುತ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಭಾವನೆಗಳು, ಸಂಬಂಧಗಳಿಗೆ ಹಲವಾರು ಲೇಯರ್ ಈ ಚಿತ್ರದಲ್ಲಿದೆ, ಜೆ.ಅನೂಪ್ ಸೀಳನ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳು ಕೇಳಲು ಇಂಪಾಗಿವೆ. ಅಶ್ವಿನ್ ಕೆನಡಿ ಅವರ ಕ್ಯಾಮೆರಾ ವರ್ಕ್ ಚಿತ್ರದ ಹೈಲೈಟ್. ಅಭುವನಸ ಕ್ರಿಯೇಶನ್ಸ್ ಮೂಲಕ ನಿರ್ಮಾಪಕ ಎಂ.ಆರ್. ರವೀಂದ್ರಕುಮಾರ್ ಅವರು ಈ ಚಿತ್ತದ ಮೂಲಕ ಕನ್ನಡ ಚಿತ್ರರಂಗಕ್ಕೆ ಒಂದು ಉತ್ತಮ ಕೊಡುಗೆಯಠನ್ನು ನೀಡಿದ್ದಾರೆ.