ನಿರ್ದೇಶಕ: ಅರುಣ್ ಅಮುಕ್ತ,
ನಿರ್ಮಾಪಕರು: ಸುಬ್ರಮಣ್ಯ ಕುಕ್ಕೆ, ಎ.ಸಿ. ಶಿವಲಿಂಗೇಗೌಡ,
ಸಂಗೀತ: ವಿಜೇತ್ ಕೃಷ್ಣ,
ತಾರಾಗಣ: ಚಂದನ್ ಶೆಟ್ಟಿ, ಅಮರ್, ಭಾವನಾ, ಮನಸ್ವಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ್ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಇತರರು.
ಹರೆಯಕ್ಕೆ ಕಾಲಿಟ್ಟ ಮಕ್ಕಳನ್ನು ಪೋಷಕರು ಅದೆಷ್ಟು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು, ಅವರು ತಪ್ಪುದಾರಿ ಹಿಡಿದಾಗ ಹೇಗೆ ಸರಿ ದಾರಿಗೆ ತರಬೇಕು, ಮತ್ತು ಅವರಿಗೆ ಹೇಗೆ ಜೀವನದ ಅರ್ಥ ತಿಳಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ಈ ವಾರ ತೆರೆಕಂಡಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ` ಚಿತ್ರದ ಮೂಲಕ ನಿರ್ದೇಶಕ ಅರುಣ್ ಆಮುಕ್ತ ಪ್ರಯತ್ನಿಸಿದ್ದಾರೆ.
ಸ್ಥಿತಿವಂತರ ಮಕ್ಕಳೇ ಓದುತ್ತಿರುವ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಶಾರದಾ, ಶಾಲಾ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಅದೇ ಶಾಲೆಯಲ್ಲಿ ಓದುತ್ತಿರುವ ಪ್ರಭಾವಿ ಶ್ರೀಮಂತರ ಮಕ್ಕಳಾದ ಯಶ್(ಮನೋಜ್ ವಿವಾನ್), ಧ್ರುವ(ಅಮರೇಂದ್ರನ್) ಹಾಗೂ ರಮ್ಯಾ(ಭಾವನ) ಶಾಲೆಯ ವಿದ್ಯಾರ್ಥಿಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡುರುತ್ತಾರೆ. ಆ ಗ್ಯಾಂಗ್ಗೆ
ಬೆಡಗಿ ನಿವೇದಿತಾ (ಮನಸ್ವಿ) ಕೂಡ ಸೇರಿಕೊಳ್ಳುತ್ತಾಳೆ. ಪ್ರಿನ್ಸಿಪಾಲರಿಂದ ಪ್ಯೂನ್ವರೆಗೆ ಎಲ್ಲರನ್ನೂ ತಮ್ಮಿಷ್ಟ ಬಂದಂತೆ ಆಡಿಸುವ ಈ. ವಿದ್ಯಾರ್ಥಿಗಳು ಇಡೀ ಶಾಲೆಗೆ ಕಳಂಕವಾಗಿರುತ್ತಾರೆ. ಅಹಂಕಾರದಿಂದ ಮೆರೆಯುತ್ತಿದ್ದ ಇವರಿಗೆ ಒಬ್ಬವ್ಯಕ್ತಿ ತಕ್ಕ ಪಾಠ ಕಲಿಸುತ್ತಾನೆ. ಅವರೆಲ್ಲ ಒಂದು ಹಂತದಲ್ಲಿ ಸರಿದಾರಿಗೆ ಬರುತ್ತಾರೆ. ತಮ್ಮ ತಪ್ಪನ್ನು ಅರಿತುಕೊಳ್ಳುತ್ತಾರೆ. ಅವರನ್ನು ಸರಿದಾರಿಗೆ ಬರಲು ಕಾರಣನಾದ ವ್ಯಕ್ತಿ ಯಾರೆಂದು ನೋಡಿದಾಗ ಆ ಶಾಲೆಗೆ ಹೊಸದಾಗಿ ಸೇರಿದ ಅಟೆಂಡರ್ ರಾಮು(ಚಂದನ್ ಶೆಟ್ಟಿ) ಕಾಣುತ್ತಾರೆ. ಈ ದುರಹಂಕಾರಿಗಳಿಗೆ ಬುದ್ಧಿ ಹೇಳಲು ಹೋಗಿ ನಂತರ ಇಕ್ಕಟ್ಟಿಗೆ ಸಿಲುಕಿ ಅವರ ಮಾತಿನಂತೆ ನಡೆದುಕೊಳ್ಳುವ ಪರಿಸ್ಥಿತಿ ರಾಮುಗೆ ಎದುರಾಗುತ್ತದೆ. ರಾಜಕಾರಣಿ , ಪೊಲೀಸ್, ನಟಿ ಹಾಗೂ ಪತ್ರಕರ್ತನ ಮಕ್ಕಳಾದ ಇವರ ಆಟಕ್ಕೆ ಒಂದು ಸರಿ ಪಾಠ ಹೇಳುವಂತಹ ಗೇಮ್ ಎದುರಾಗುತ್ತದೆ , ಈ ಎಲ್ಲಾ ಘಟನೆಗಳಿಗೆ ರೋಚಕ ತಿರುವು ನಾಂದಿ ಹಾಡುತ್ತದೆ. ಇವತ್ತಿನ ಕಾಲಘಟ್ಟಕ್ಕೆ ಹೊಂದುವಂಥ ಮತ್ತು ಈಗಿನ ಟೆಕ್ನಾಲಜಿ ಬಳಸಿಕೊಂಡು ನಿರ್ದೇಶಕ ಅರುಣ್ ಅಮುಕ್ತ. ಚಿತ್ರಕಥೆಯನ್ನು ನಿರೂಪಿಸೋ ಪ್ರಯತ್ನ ಮಾಡಿದ್ದಾರೆ. ಇವತ್ತಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಾತ್ರವಲ್ಲದೆ, ಮಕ್ಕಳು ಮತ್ತು ಅವರ ಪೋಷಕರೂ ಸಹ ಒಟ್ಟಿಗೆ ನೋಡುವಂಥ ಚಿತ್ರ. ಮಕ್ಕಳ ಜೊತೆಗೆ ಪೋಷಕರಿಗೂ ಚಿತ್ರದಲ್ಲಿ ಸಂದೇಶವಿದೆ. ಮಕ್ಕಳಿಗೆ ಶ್ರೀಮಂತಿಕೆಯ ರುಚಿ ತೋರಿಸದೆ, ಅವರಜೊತೆ ಪ್ರೀತಿಯಿಂದ ನಡೆದುಕೊಳ್ಳಿ ಎಂಬ ಸಂದೇಶ ತಂದೆ ತಾಯಿಗಳಿಗಿದೆ ಯುವ ಜನಾಂಗವನ್ನು ಹಾಳು ಮಾಡುತ್ತಿರುವ ಮಾದಕವ್ಯಸನ, ಆನ್ಲೈನ್ ಗೇಮಿಂಗ್, ರಾಗಿಂಗ್ ನಂಥ ಹಲವು ವಿಷಯಗಳ ಬಗ್ಗೆ ನಿರ್ದೇಶಕರು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.
ಚಿತ್ರದಲ್ಲಿ ಮಕ್ಕಳು, ಪೋಷಕರಿಬ್ಬರಿಗೂ ಒಂದೊಳ್ಳೆಯ ಸಂದೇಶವಿದೆ. ಮೊದಲಾರ್ಧದಲ್ಕಿ ನಿಧಾನವಾಗಿ ಸಾಗೋ ಕಥೆ, ದ್ವಿತೀಯಾರ್ಧದಲ್ಲಿ ಆವೇಗ ಪಡೆದುಕೊಳ್ಳುತ್ತದೆ. . ಅದರಲ್ಲೂ ಆಗುಂತಕನೊಬ್ಬ ಆ ನಾಲ್ವರನ್ನು ತನ್ನ ಜಾಲದಲ್ಲಿ ಸಿಕ್ಕಿಸುತ್ತಾ ಹೋದಂತೆ ಚಿತ್ರಕ್ಕೊಂದು ತಿರುವು ಜೊತೆಗೆ ವೇಗವೂ ಸಿಗುತ್ತದೆ. ಪ್ರೇಕ್ಷಕರ ನಿರೀಕ್ಷೆಯಂತೆಯೇ ಚಿತ್ರ ಸಾಗುತ್ತದೆ ಮತ್ತು ಮುಕ್ತಾಯವಾಗುತ್ತದೆ.
ರ್ಯಾಪರ್ ಚಂದನ್ ಶೆಟ್ಟಿ, ಈ ಚಿತ್ರದ ಮೂಲಕ ನಟರಾಗಿ ಮಿಂಚಿದ್ದಾರೆ. ಚಿತ್ರದಲ್ಲಿ ಅವರು ಎರಡು ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.ಮೊದಲ ಬಾರಿಗೆ ನಟಿಸಿರುವ ಅಮರ್, ಭಾವನಾ, ಮನಸ್ವಿ ಮತ್ತು ವಿವಾನ್ ಕೆಲವು ದೃಶ್ಯಗಳಲ್ಲಿ ಹಾವಭಾವ ವ್ಯಕ್ತಪಡಿಸಿದರೂ ನಟನೆಯಲ್ಲಿ ಸ್ವಲ್ಪ ಪಳಗಬೇಕು. ಈ ಕಿರಿಯರ ಜೊತೆ ಅನುಭವಿಗಳಾದ ಅರವಿಂದರ್ ರಾವ್, ಭವ್ಯ, ಸುನೀಲ್ ಪುರಾಣಿಕ್, ಪ್ರಶಾಂತ್ ಸಂಬರ್ಗಿ ತಮ್ಮ ಕೆಲಸವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ‘ಕಾಕ್ರೋಚ್’ ಸುಧಿ ಮತ್ತು ಸಿಂಚನಾ ನೋಡುಗರ ಗಮನ ಸೆಳೆಯುತ್ತಾರೆ. ವಿಜೇತ್ ಕೃಷ್ಣ ಅವರ ಸಂಗೀತ ಮನಸಿಗೆ ಮುದ ನೀಡುತ್ತದೆ.