ನಿರ್ದೇಶಕ : ಅಂಬರೀಶ್ .ಎಂ.
ನಿರ್ಮಾಪಕರು : ವಿ. ರವಿಕುಮಾರ್, ಶಂಶುದ್ದೀನ್. ಎ.
ಸಂಗೀತ : ಜ್ಯೂಡಾ ಸ್ಯಾಂಡಿ,
ಛಾಯಾಗ್ರಹಣ : ಹಾಲೇಶ್,
ತಾರಾಗಣ : ಅಜಯ್ ಪೃಥ್ವಿ , ರಚನಾ ಇಂದರ್, ಸಲ್ಮಾನ್, ರವಿಶಂಕರ್, ಗೋವಿಂದೇಗೌಡ , ಕಾಕ್ರೋಚ್ ಸುದಿ , ಪ್ರಶಾಂತ್ ಸಿದ್ಧಿ ಇತರರು.
ಚಿತ್ರದ ನಾಯಕ ಅಜಯ್ ( ಅಜಯ್ ಪೃಥ್ವಿ) ಅಂಬುಲೆನ್ಸ್ ಚಾಲಕ, ಆತನ ಗೆಳತಿ ಶ್ರೀದೇವಿ (ರಚನಾ ಇಂದರ್) ಒಬ್ಬ ನರ್ಸ್. ಬಡ್ಡಿ ವ್ಯವಹಾರ ಮಾಡಿಕೊಂಡಿದ್ದ ಒಂಟಿ ಕೊಪ್ಪಲು ದೇವರಾಜ್ (ರವಿಶಂಕರ್) ಹಾಗೂ ತಂದೆಯ ಕಾರ್ಯ ಮಾಡಲು ವಿದೇಶದಿಂದ ಬರುವ ಶ್ರೀಧರ (ಗೋಪಾಲಕೃಷ್ಣ ದೇಶಪಾಂಡೆ). ಈ ನಾಲ್ಕು ಜನರ ಸುತ್ತ ನಡೆಯುವ ಹುಲಿ- ಕುರಿ ಆಟದ ಕಥೆಯನ್ನು ನಿರ್ದೇಶಕ ಅಂಬರೀಶ್ ತಮ್ಮ ನಾಟ್ ಔಟ್ ಚಿತ್ರದ ಮೂಲಕ ನಿರೂಪಿಸಿದ್ದಾರೆ.
ತನ್ನ ಬಳಿ ಕಷ್ಟ ಅಂತ ಸಾಲ ಕೇಳಿ ಬಂದವರಿಗೆ ಹಣ ನೀಡುವ ಒಂಟಿ ಕೊಪ್ಪಲು ದೇವರಾಜ್, ನಂತರ ಅವರು ಸಮಯಕ್ಕೆ ಸರಿಯಾಗಿ ಹಣ ಕೊಡದೆ ಹೋದರೆ, ತನ್ನ ಗ್ಯಾಂಗ್ ಮೂಲಕ ಎತ್ತಾಕ್ಕೊಂಡ್ ಬಂದು ಅವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿರುತ್ತಾನೆ. ಇದರ ನಡುವೆ ಆಂಬುಲೆನ್ಸ್ ಚಾಲಕ ಅಜಯ್ ( ಅಜಯ್ ಪೃಥ್ವಿ) ಕೂಡ ಇದೇ ದೇವರಾಜ್ ಬಳಿ ಸಾಲ ಪಡೆದಿರುತ್ತಾನೆ. ನರ್ಸ್ ಶ್ರೀದೇವಿ (ರಚನಾ ಇಂದರ್). ಅಜಯ್ ನ ಲವರ್. ಆಕೆ ಹಾಸ್ಪಿಟಲ್ ವೊಂದರಲ್ಲಿ ನರ್ಸ್ ಕೆಲಸ ಮಾಡುತ್ತಾ ತನ್ನ ಪ್ರಿಯಕರನ ಜೊತೆ ವಿದೇಶಕ್ಕೆ ಹೋಗಿ ಹಣ ಸಂಪಾದನೆ ಮಾಡುವ ಆಸೆ ಆಕೆಯದು.
ಇದರ ನಡುವೆ ತನ್ನ ತಂದೆ ಪೋಸ್ಟ್ ಮಾಸ್ಟರ್ ಆಗಿ ಸಂಪಾದಿಸಿದ ನಾಲ್ಕು ಎಕರೆ ಜಮೀನಿನಲ್ಲಿ ಅಪ್ಪನ ವರ್ಷದ ಕಾರ್ಯ ಮಾಡಲು ವಿದೇಶದಿಂದ ಬಂದ. ಶ್ರೀಧರ (ಗೋಪಾಲಕೃಷ್ಣ ದೇಶಪಾಂಡೆ)ಗೆ ತನ್ನ ಜಮೀನು ದೇವರಾಜ್ ವಶದಲ್ಲಿರುವುದು ಗೊತ್ತಾಗುತ್ತದೆ. ದೇವರಾಜ್ ಆ ಜಮೀನನ್ನು ತನ್ನದಾಗಿ ಮಾಡಿಕೊಂಡಿರುತ್ತಾನೆ, ಇದಕ್ಕೆ ಪೊಲೀಸ್ ಹಾಗೂ ಕೆಲ ಅಧಿಕಾರಿಗಳು ಬೆಂಬಲವಾಗಿರುತ್ತಾರೆ.
ತನ್ನ ಜಮೀನನ್ನು ಕಳೆದುಕೊಂಡುದಲ್ಲದೆ ತಂದೆಯ ಸಮಾದಿಗೆ ಪೂಜೆ ಸಲ್ಲಿಸಲೂ ಅಗದೆ ಪರದಾಡುವ ಶ್ರೀಧರ್ ಪರದಾಡುತ್ತಾನೆ.
ಆಗ ಸಿನಿಮಾ ನಿರ್ದೇಶನ ಮಾಡುವ ಆಸೆ ಇಟ್ಟುಕೊಂಡು, ಹೋಟೆಲ್ ವೇಟರ್ ಕೆಲಸ ಮಾಡುತ್ತಿದ್ದ ಮೈಕಲ್ (ಗೋವಿಂದೇಗೌಡ) ರೌಡಿ ಸ್ನೇಕ್ ಸೀನನನ್ನ ಶ್ರೀಧರ್ ಗೆ ಪರಿಚಯ ಮಾಡಿಸುತ್ತಾನೆ. ಇದರ ನಡುವೆ ಸ್ನೇಹಿತ ಸೀನನ ಬಳಿ ಗೆಳೆಯ ಅಜಯ್ ತನ್ನ ಕಷ್ಟ ಹೇಳಿಕೊಂಡಿರುತ್ತಾನೆ. ಶ್ರೀಧರ ಹೇಳಿದ ಡೀಲ್ ಬೇಡ ಎಂದಿದ್ದ ಸ್ನೇಕ್ ಸೀನನನ್ನ ಡೀಲ್ ಗೆ ಒಪ್ಪಿಸುವ ಅಜಯ್, ದೇವರಾಜ್ ಕೊಲೆ ಮಾಡಲು ಸಂಚು ರೂಪಿಸುತ್ತಾರೆ. ಅಲ್ಲಿಂದ ಕಥೆ ಬೇರೆಯದೇ ತಿರುವು ಪಡೆದು ರೋಚಕ ಘಟ್ಟಕ್ಕೆ ಬಂದು ನಿಲ್ಲುತ್ತದೆ.
ಮುಂದೆ ದೇವರಾಜ್ ಕೊಲೆ ಮಾಡಿಸೋ ಅಜಯ್ ಪ್ಲಾನ್ ಸಕ್ಸಸ್ ಆಗುತ್ತಾ... ಶ್ರೀದೇವಿಯ ವಿದೇಶದ ಆಸೆ ಏನಾಯ್ತು...ಇದಕ್ಕೆಲ್ಲ ನಾಟ್ ಔಟ್ ಚಿತ್ರದ ಕ್ಲೈಮಾನ್ಸ್ ಉತ್ತರ ನೀಡುತ್ತದೆ.
ನಿರ್ದೇಶಕ ಅಂಬರೀಶ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತುವೇ ವಿಭಿನ್ನವಾಗಿದ್ದು , ಜೀವ ಹಾಗೂ ಜೀವನದ ಪಾಠವನ್ನು ಹುಲಿ ಕುರಿ ಆಟಕ್ಕೆ ಬೆಸೆದಿರುವ ರೀತಿ ಉತ್ತಮವಾಗಿದೆ. ಚಿತ್ರದ ಮೊದಲ ಭಾಗಕ್ಕಿಂತ ಸೆಕೆಂಡ್ ಹಾಫ್ ಹೆಚ್ಚು ಗಮನ ಸೆಳೆಯುತ್ತದೆ. ಸಂಗೀತ ಹಾಗೂ ಛಾಯಾಗ್ರಹಣದ ಕಡೆ ಮತ್ತಷ್ಟು ಗಮನ ನೀಡಬೇಕಿತ್ತು.
ಹುಲಿ- ಕುರಿ ಆಟ ಅದು ಎಂದರೆ ರೀತಿಯ ಚದುರಂಗದಾಟ. ಅಂತಹದ್ದೇ ಕಾನ್ಸೆಪ್ಟ್ ನೊಂದಿಗೆ ಬದುಕು, ಬವಣೆ, ಆಸ್ತಿಯ ದಾಹ,ಬಡ್ಡಿ ವ್ಯವಹಾರ , ಮೋಸ, ವಂಚನೆಯಂಥಾ ಅಂಶಗಳನ್ನಿಟ್ಟುಕೊಂಡು ಜೀವ ಹಾಗೂ ಜೀವನದ ಪಾಠವನ್ನು ನಿರ್ದೇಶಕರು ಸೊಗಸಾಗಿ ಹೇಳಿದ್ದಾರೆ.
ಖಳನಟ ರವಿಶಂಕರ್ ಅವರ ಗತ್ತಿನ ಮಾತು, ಖದರ್ ಇಡೀ ಚಿತ್ರದ ಹೈಲೈಟ್ ಎನ್ನಬಹುದು. ಹಣೆಯ ಮೇಲಿನ ನಾಲ್ಕು ನಾಮದ ಪವರ್ ಫುಲ್ ಡೈಲಾಗ್ ಡೆಲಿವರಿ ಜೊತೆಗೆ ಇಡೀ ಚಿತ್ರದ ಕೇಂದ್ರ ಬಿಂದುವಾಗಿದ್ದಾರೆ. ನಾಯಕ ಅಜಯ್ ಪೃಥ್ವಿ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಬ್ಬ ಪ್ರೇಮಿಯಾಗಿ ಗಮನ ಸೆಳೆದಿದ್ದಾರೆ. ಇನ್ನು ನರ್ಸ್ ಪಾತ್ರಕ್ಕೆ ರಚನಾ ಇಂದರ್ ಜೀವ ತುಂಬಿ ಅಭಿನಯಿಸಿದ್ದಾರೆ. ತನ್ನ ನೋವನ್ನ ನುಂಗಿ ಸುಪಾರಿ ನೀಡುವ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಮನೋಜ್ಞ ಅಭಿನಯ ನೀಡಿದ್ದಾರೆ.