ತುಳುನಾಡು ನೆಲದಲ್ಲಿ ಅನೇಕ ದಂತಕಥೆಗಳಿವೆ. ಆದರೆ ಕೆಲವೊಬ್ಬರಷ್ಟೇ ಅವುಗಳನ್ನು ತೆರೆಮೇಲೆ ತರೋ ಪ್ರಯತ್ನ ಮಾಡಿದ್ದರು. ಕೋಟೆ ಚನ್ನಯ್ಯ, ಕಾಂತಾರ ನಂತರ ಅಂಥಾ ಸಾಹಸಕ್ಕೆ ಕೈಹಾಕಿರೋದು ಅಧಿಪತ್ರ ಚಿತ್ರತಂಡ. ತುಳುನಾಡ ಸಂಸ್ಕೃತಿ ಆಟಿಕಳಂಜ ಈ ಚಿತ್ರದ ಮೇನ್ ಕಾನ್ಸೆಪ್ಟ್ ಅಧಿಪತ್ರ ಸಿನಿಮಾ ಕಥೆ ಇದೇ ಅಂಶದ ಸುತ್ತ ನಡೆದರೂ ಅದು ರಿವೀಲ್ ಆಗೋದು ಚಿತ್ರದ ಕ್ಲೈಮ್ಯಾಕ್ಸ್ ಸೀನ್ ನಲ್ಲಿ ಮಾತ್ರ. ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಈ ಚಿತ್ರದ ಮೂಲಕ ಮೊದಲಬಾರಿಗೆ ಪೊಲೀಸ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅರಣ್ಯ ಪ್ರದೇಶದ ಅನೇಕ ಮರಗಿಡಗಳಲ್ಲಿ ವಿಜ್ಞಾನವನ್ನೇ ಬೆರಗಾಗಿಸೋ ಅನೇಕ ಔಷಧೀಯ ಸಸ್ಯಗಳಿವೆ.
ಉಡುಪಿ ಜಿಲ್ಲೆಯ ಶಿವಪುರ ಪೊಲೀಸ್ ಠಾಣೆಗೆ ಹೊಸದಾಗಿ ಸಬ್ ಇನ್ಸ್ಪೆಕ್ಟರ್ ಆಗಿ ಬಂದ ಅತ್ರೇಯ(ರೂಪೇಶ್ ಶೆಟ್ಟಿ) ಆರಂಭದಲ್ಲೇ ಅಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ ಕೇಸ್ ಎದಿರಿಸಬೇಕಾಗುತ್ತೆ. ಅದರ ಮೂಲ ಕೆದಕುತ್ತ ಹೋದಂತೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕೆಂದು ಬಂದ ಅತ್ರೇಯ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಊರಲ್ಲಿ ಒಂದರ ಹಿಂದೊಂದರಂತೆ ಸಂಭವಿಸುತ್ತಿರುವ ಅಸಹಜ ಸಾವುಗಳ ರಹಸ್ಯ ಬಯಲು ಮಾಡುವುದೇ ದೊಡ್ಡ ಸವಾಲಾಗುತ್ತದೆ. ಇನ್ಸಪೆಕ್ಟರ್ ವಿಶ್ವನಾಥನ ಸಾವು, ಪತ್ರಿಕಾ ಸಂಪಾದಕ ಬಲರಾಮ್ನ ಮರಣ, ಬ್ರಹ್ಮರಾಕ್ಷಸ, ಕಗ್ಗರ ಬೆಟ್ಟದ ನಿಗೂಢ ರಹಸ್ಯ ಇದೆಲ್ಲವೂ ಅತ್ರೇಯನಿಗೆ ಬಿಡಿಸಲಾಗದ ಕಗ್ಗಂಟಾಗಿ ಕಂಡುಬರುತ್ತದೆ,
ಬುದ್ದಿವಂತಿಕೆಯಿಂದ ಒಂದೊಂದೇ ಸಮಸ್ಯೆಗಳನ್ನು ಬಿಡಿಸುತ್ತಾ ಹೋದಂತೆ ಅತ್ರೇಯನಿಗೆ ಆ ಎಲ್ಲ ಕೊಲೆಗಳ ಹಿಂದಿರುವುದು ಒಬ್ಬರದೇ ಕೈ ಎನ್ನುವುದೂ ಗೊತ್ತಾಗುತ್ತದೆ, ಇನ್ನೇನು ಅತ್ರೇಯ ಕೊಲೆಗಾರನನ್ನು ಪತ್ತೇ ಹಚ್ಚಿಬಿಟ್ಟೆ ಎಂದುಕೊಳ್ಳುತ್ತಿರುವಾಗಲೇ ಅಲ್ಲಿ ಮತ್ತೊಂದು ರಹಸ್ಯ ರಿವೀಲಾಗುತ್ತದೆ, ಈ ಹುಡುಕಾಟದಲ್ಲಿ ಕಥಾನಾಯಕನಿಗೆ ತನ್ನ ತಂದೆ-ತಾಯಿಯ ಬಗ್ಗೆ ಮಾಹಿತಿಯೂ ಸಿಗುತ್ತದೆ.
ಇತ್ತ ಅತ್ರೇಯ ಯಾರನ್ನು ಕೊಲೆಗಾರ ಎಂದುಕೊಂಡಿರ್ತಾನೋ ಅವರ್ಯಾರೂ ಕೊಲೆಗಾರರಾಗಿರುವುದಿಲ್ಲ, ಅದರ ಹಿಂದಿರುವ ಕೈ ಬೇರೇನೇ ಇರುತ್ತದೆ, ತಂದೆಯಿಲ್ಲದ ಅತ್ರೇಯನನ್ನು ಆತನ ತಾತನೇ ಆಶ್ರಮದಲ್ಲಿಟ್ಟು ಬೆಳೆಸುತ್ತಾನೆ, ಅದ್ಯಾಕೆ ಎನ್ನುವುದು ಚಿತ್ರದಲ್ಲಿ ನೋಡೇ ತಿಳಿಯಬೇಕು, ೨೫ ವರ್ಷಗಳ ಹಿಂದೆ ಮಾರ್ಕಂಡೇಯ ಎಂಬ ವ್ಯಕ್ತಿ ಮರದ ಬೇರುಗಳಿಂದ ಸಂಗ್ರಹಿಸಿ ಕೊಡುತ್ತಿದ್ದ ಮದ್ದಿಗೆ ಅದೆಂಥ ಖಾಯಿಲೆಯನ್ನಾದರೂ ವಾಸಿ ಮಾಡುವ ಶಕ್ತಿಯಿರುತ್ತದೆ, ಆಟಿ ಅಮವಾಸ್ಯೆಯ ದಿನ ಅದರ ಕಷಾಯ ಮಾಡಿಕೊಂಡು ಕುಡಿದರೆ, ಆತನಿಗೆ ಯಾವುದೇ ರೋಗ ಬರಲ್ಲ ಎನ್ನುವ ನಂಬಿಕೆಯು ಆ ಊರ ಜನರಲ್ಲಿರುತ್ತದೆ, ಕಳಂಜ ಎಂದರೆ ಊರವರ ಕಷ್ಟ ದೂರಮಾಡಲು ಆ ದೇವರೇ ಕಳಿಸಿದ ದೂತ ಎನ್ನುವ ನಂಬಿಕೆ ಅವರದ್ದು, ಆದರೆ ಹೊಲದಲ್ಲಿ ಸಿಕ್ಕ ನಿಧಿ ನಾಯಕನ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಳ್ಳುತ್ತದೆ, ಆ ನಿಧಿಗೋಸ್ಕರ ಇಡೀ ಕುಟುಂಬವನ್ನೇ ಮೂವರು ದುಷ್ಟರು ಬಲಿತೆಗೆದುಕೊಂಡಿರುತ್ತಾರೆ, ಈ ಕಥೆಗೂ ಆ ಕೊಲೆಗಳಿಗೂ ಇರುವ ಸಂಬಂಧವೇನು ಎಂದು ತಿಳಿಯಲು ನೀವು ಥೇಟರಿಗೆ ಹೋಗಲೇಬೇಕು, ಒಂದಷ್ಟು ಕೌತುಕದ ಪ್ರಶ್ನೆಗಳನ್ನು ಮೂಡಿಸುತ್ತಾ ಸಾಗಿ ಕ್ಲೈಮ್ಯಾಕ್ಸ್ನಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತದೆ.
ಹೀರೋಗೆ ಯಾವುದೇ ಬಿಲ್ಡಪ್ ಕಿಡದೆ ನೀಟಾಗಿ ಕಥೆ ಹೇಳಿರುವುದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಚಿತ್ರದಲ್ಲಿ ಒಂದು ಕ್ಯೂರಿಯಾಸಿಟಿ ಇದೆ. ಟ್ವಿಸ್ಟ್ ಅಂಡ್ ಟರ್ನ್ ಹೇರಳವಾಗಿದ್ದು ಮುಂದೇನಾಗುತ್ತೋ ಎಂಬ ಕುತೂಹಲ ಹುಟ್ಟು ಹಾಕುತ್ತಲೇ ಸಾಗುತ್ತವೆ. ನಿರ್ದೇಶಕ ಚಯನ್ ಶೆಟ್ಟಿ ಮೊದಲ ಪ್ರಯತ್ನದಲ್ಲೇ ಅನುಭವಿಯಂತೆ ಡೈರೆಕ್ಷನ್ ಮಾಡಿದ್ದಾರೆ, ಕರಾವಳಿ ಸೊಗಡಿನ ಥ್ರಿಲ್ಲರ್ ಕಥೆಯನ್ನು ಪ್ರೇಕ್ಚಕರ ಮುಂದೆ ತೆರೆದಿಟ್ಟಿದ್ದಾರೆ.
ಇವರ ವಿಷನ್ಗೆ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮಿ ಗೌಡ ಬಂಡವಾಳ ಹೂಡಿದ್ದಾರೆ. ಹಿರಿಯ ನಟ ಎಂ.ಕೆ.ಮಠ, ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ದೀಪಕ್ ರೈ, ಪ್ರಶಾಂತ್ ನಟನ ಇವರಲ್ಲರ ಪಳಗಿದ ಅಭಿನಯ ಚಿತ್ರ ನೈಜತೆಯಿಂದ ಮೂಡಿಬರಲು ಸಹಕಾರಿಯಾಗಿದೆ,
ನಟ ರೂಪೇಶ್ ಶೆಟ್ಟಿ ನಿಷ್ಠಾವಂತ ಪೊಲೀಸ್ ಆಧಿಕಾರಿಯಾಗಿ ಸಹಜಾಭಿನಯ ನೀಡಿದ್ದಾರೆ. ಇಡೀ ಸಿನಿಮಾ ಇರುವುದೇ ಕೊಲೆ ಕೌತುಕದ ಮೇಲೆ.
ಸಿನಿಮಾ ನೋಡೋ ಪ್ರೇಕ್ಷಕರ ಮನದಲ್ಲಿ ಕಾಂತಾರ ಹಾಗೇ ಬಂದು ಹೋದಂತೆ ಭಾಸವಾಗುತ್ತದೆ. ನಿರ್ದೇಶಕ ಚಯನ್ ಶೆಟ್ಟಿ ಅವರು ಅಚ್ಚುಕಟ್ಟಾಗೇ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಅಂದಹಾಗೆ, `ಅಧಿಪತ್ರ` ಸಿನಿಮಾದ ಕಥೆ ನಡೆಯುವುದು ರೆಟ್ರೋ ಕಾಲಘಟ್ಟದಲ್ಲಿ. ಮೊಬೈಲ್, ಸೋಶಿಯಲ್ ಮೀಡಿಯಾ, ಸಿಸಿಟಿವಿ ಇದಾವುದೂ ಇಲ್ಲದ ಕಾಲಘಟ್ಟದಲ್ಲಿ. ನಟಿ ಜಾಹ್ನವಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ರಘು ಪಾಂಡೇಶ್ವರ್, ದೀಪಕ್ ರೈ ಪಾಣಾಜೆ ಮುಂತಾದವರು ನೆಗೆಟಿವ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.