ಬಲದಲ್ಲಿ ಭೀಮ, ತಾಳ್ಮೆಯಲ್ಲಿ ರಾಮ, ಕೋಪದಲ್ಲಿ ವ್ಯಾಘ್ರನಿಗಿಂತ ಜಾಸ್ತಿ, ನನ್ನ ಗಜರಾಮ ಈ ಡೈಲಾಗ್ ತೆರೆಮೇಲೆ ಬಂದಾಗ. ಇಡೀ ಥಿಯೇಟರ್ ತುಂಬಾ ಸಿಳ್ಳೆ, ಕೂಗು ಕೇಳಿಬರುತ್ತದೆ, ಈವಾರ ತೆರೆಕಂಡ ಗಜರಾಮ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು.
ಹಳ್ಳಿಯ ಬಡ ಕುಟುಂಬವೊಂದರಲ್ಲಿ ಹುಟ್ಟಿದ ನಾಯಕ ರಾಮ( ರಾಜವರ್ಧನ್) ತಾಯಿಯ ಆಸರೆಯಲ್ಲಿ ಬೆಳೆಯುತ್ತಾನೆ. ಶಾಲಾ ದಿನಗಳಲ್ಲಿ ಸಹಜವಾಗೇ ತುಂಟನಾಗಿದ್ದ ರಾಮ ನೆರೆಯ ಸಹಪಾಠಿ ಹುಡುಗಿಯನ್ನು ಪ್ರೀತಿಸುತ್ತಾನೆ. ತನ್ನ ಗೆಳೆಯನಿಗೆ ಹೊಡೆದ ಕಾರಣಕ್ಕೆ ಪಾಠ ಹೇಳೋ ಗುರುವಿಗೇ ತಿರುಗಿ ಹೊಡೆದು, ನಾನು ರಾಮ ಅಲ್ಲ, ರಾವಣ ಎನ್ನುತ್ತ ಉಗ್ರರೂಪ ತಾಳುತ್ತಾನೆ, ಆತನ ಕೋಪ ತಾಪ ನೋಡಿದ ಎಳೆ ಹುಡುಗಿಯ ಹೃದಯದಲ್ಲಿ ಆತನ ಮೇಲೆ ಭಯ ಮನೆ ಮಾಡುತ್ತದೆ. ನಂತರದ ದಿನಗಳಲ್ಲಿ ಆಕೆಯ ಬೆಂಗಾವಲಾಗಿದ್ದ ನಾಯಕ ರಾಮ, ತಂದೆಯೇ ಮಗಳಿಗೆ ಹೊಡೆದರು ಎನ್ನುವ ಕಾರಣಕ್ಕೆ ಆಕೆಯ ತಂದೆಯ ಕೈಗೆ ಬರೆ ಹಾಕಿ, ಮತ್ತೊಮ್ಮೆ ತಾನು ರಾಮ ಅಲ್ಲ, ರಾವಣ ಎಂದು ಹೇಳುತ್ತಾನೆ.
ಹೆಚ್ಚಿನ ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೊರಟ ಆಕೆಯಿಂದ ಪ್ರೀತಿಯ ಭಾಷೆ ಪಡೆದು ಕಳಿಸಿಕೊಡುತ್ತಾನೆ. ಇತ್ತ ಗರಡಿ ಮನೆಯ ಉಸ್ತಾದ್, ನಾಯಕನ ಶಕ್ತಿ ಸಾಮರ್ಥ್ಯ ಕಂಡು ಬೆರಗಾಗಿ ಆತನಿಗೆ ಕುಸ್ತಿ ಪಟ್ಟುಗಳನ್ನು ಹೇಳಿಕೊಟ್ಟು ತರಬೇತಿ ನೀಡುತ್ತಾನೆ. ಅದಕ್ಕೆ ಆತನ ತಾಯಿಯ ಅನುಮತಿಯೂ ಸಿಗುತ್ತದೆ.
ಐದುಬಾರಿ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ನಡೆದಕುಸ್ತಿ ಸ್ಪರ್ಧೆಯಲ್ಲಿ ರಾಜ್ಯದ ಪ್ರತಿನಿಧಿಯಾಗಿ
ಸ್ಪರ್ಧಿಸಿ ವಿನ್ ಆದ ರಾಮ ಬೆಂಗಳೂರಿಗೆ ಆಗಮಿಸುತ್ತಾನೆ.
ಬೆಂಗಳೂರಿನಿAದ ತನ್ನೂರಿಗೆ ಬಂದು ಪ್ರಿಯತಮೆಯನ್ನು ನೋಡುವ ಖುಷಿಯಲ್ಲಿದ್ದ ರಾಮನಿಗೆ, ಆಕೆ ಶ್ರೀಮಂತನನ್ನು ವರಿಸಲು ಹೊರಟ ಮದುವೆ ಆಮಂತ್ರಣ ಪತ್ರಿಕೆ ಕಾಣುತ್ತದೆ. ನಿನ್ನನ್ನು ಬೇರೆಯವನೊಂದಿಗೆ ಮದುವೆಯಾಗಲು ಬಿಡೆಲಾರೆ ಎಂದು ಉಗ್ರನಾದ ರಾಮ, ನಾಯಕಿಯ ಕಣ್ಣಿಗೆ ರಾಕ್ಷಸನಂತೆ ಕಂಡುಬರುತ್ತಾನೆ. ಆಕೆ ಮತ್ತೆ ರಾಮನನ್ನು ದ್ವೇಷಿಸಲು ಪ್ರಾರಂಭಿಸುತ್ತಾಳೆ.
ಇತ್ತ ಆಕೆ ಮದುವೆಯಾಗಲಿರುವ ಎಸಿಪಿಯೊಂದಿಗೆ ದ್ವೇಷ ಕಟ್ಟಿಕೊಂಡಿದ್ದ ಪಾತಕಿಗಳ ತಂಡವೊಂದು ಸೇಡು ತೀರಿಸಿಕೊಳ್ಳಲು ಹವಣಿಸಿರುತ್ತದೆ. ಪಾತಕಿಗಳು, ಎಸಿಪಿ ಮತ್ತು ನಾಯಕನ ಕದನದಲ್ಲಿ ನಾಯಕಿ ಏನಾದಳು?.. ಅವರ ಪ್ರೀತಿ ಗೆದ್ದಿತೇ ? ಅಥವಾ ಗರಡಿ ಮನೆ ಕಥೆ ಏನಾಯ್ತು?, ನಾಯಕ ಒಬ್ಬ ರಾಮನಾ ಅಥವಾ ರಾವಣನಾ? ಕೊನೆಗೇನಾಯ್ತು ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿದೆ. ಕೊನೆಯವರೆಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಚಿತ್ರ ಯಶಸ್ವಿಯಾಗಿದೆ. ಪ್ರಣಯಗೀತೆ, ವಿರಹಗೀತೆ ನೋಡುಗರಲ್ಲಿ ಹಲವು ಭಾವಗಳನ್ನು ಮೂಡಿಸಿ, ಮನದಲ್ಲಿ ಗುನುಗುವಂತೆ ಮಾಡುತ್ತದೆ.
ಚಿತ್ರದಲ್ಲಿ ಕಾಮಿಡಿ, ಡಾನ್ಸ್, ಸೆಂಟಿಮೆಂಟ್, ಸಾಹಸ ಎಲ್ಲವೂ ಹಿತಮಿತವಾಗಿದೆ ಕ್ಯಾಮೆರಾ ವರ್ಕ ಅದ್ಭುತವಾಗಿದ್ದು, ಮ್ಯೂಸಿಕ್ ಚತ್ರಕಥೆಗೆ ಪೂರಕವಾಗಿ ಮೂಡಿಬಂದಿದೆ.
ನಾಯಕನಾಗಿ ರಾಜವರ್ಧನ್ ಅಭಿನಯದಲ್ಲಿ ಪ್ರಬುದ್ದತೆ ಎದ್ದು ಕಾಣಿಸುತ್ತದೆ. ಹಿಂದಿನ ಚಿತ್ರಗಳಿಗಿಂತ ಹೆಚ್ಚು ಪಳಗಿರುವುದು ಅವರ ಅಭಿನಯ ನೋಡಿದಾಗ ತಿಳಿಯುತ್ತದೆ. ನಾಯಕಿ ತಪಸ್ವಿನಿ ಪೂಣಚ್ಚ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿಶೇಷವಾಗಿ ಈ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಅವರ ಐಟಂ ಸಾಂಗ್ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತದೆ, ದೀಪಕ್, ಕಬೀರ್ಸಿಂಗ್, ತುಕಾಲಿ ಸಂತೋಷ್ ಇವರೆಲ್ಲರ ಅಭಿನಯ ತೃಪ್ತಿದಾಯಕವಾಗಿದೆ. ನರಸಿಂಹ ಮೂರ್ತಿ ಅವರ ನಿರ್ಮಾಣ ಮತ್ತು ಸುನೀಲ್ ಕುಮಾರ್ ಅವರ ನಿರ್ದೇಶನ ದಲ್ಲಿ ಗಜರಾಮ ಅತ್ಯುತ್ತಮವಾಗಿಯೇ ಹೊರಹೊಮ್ಮಿದೆ,