ಚಿತ್ರ: ಕಪಟಿ
ನಿರ್ದೇಶನ: ರವಿ ಕಿರಣ್ , ಚೇತನ್ ಎಸ್ ,ಪಿ
ನಿರ್ಮಾಣ: ದಯಾಳ್ ಪದ್ಮನಾಭನ್
ತಾರಾಗಣ: ದೇವ್ ದೇವಯ್ಯ, ಸುಕೃತಾ ವಾಗ್ಲೆ, ಸಾತ್ವಿಕ್ ಕೃಷ್ಣನ್, ಶಂಕರ್ ನಾರಾಯಣ್ ಮತ್ತಿತತರು
ರೇಟಿಂಗ್ : * 3.5/5
ಕತ್ತಲೆ ಪ್ರಪಂಚದ ಕರಾಳ ಅಧ್ಯಾಯವನ್ನು "ಕಪಟಿ" ಚಿತ್ರದ ಮೂಲಕ ಜನರ ಮುಂದಿಡಲಾಗಿದೆ, ಆಟಕ್ಕುಂಟು ಲೆಕ್ಕಕ್ಕಿಲ್ಲದ ಆಟ ಮತ್ತು ಅದರ ಕರಾಳತೆ ಅದು ವ್ಯಾಪಿಸಿರುವ ಉದ್ದ ಅಗಲವನ್ನು ತೆರೆದಿಡಲಾಗಿದೆ.
ಜಗತ್ತಿನಾದ್ಯಂತ ಇಂತಹದೊಂದು ದಂಧೆ, ಕಷ್ಟಪಡದೇ ಹಣ ಮಾಡುವ, ಜನರನ್ನು ವಂಚಿಸಿ ಯಾಮಾರಿಸುವ ಕಥೆ, ಚಿತ್ರರಂಗ ಅಷ್ಟೇ ಅಲ್ಲ ಸಾರ್ವಜನಿಕರಿಗೂ ಜಾಗೃತಿ ಮೂಡಿಸುವ ಚಿತ್ರ. ಅಂತಹ ಕೆಲಸವನ್ನು ನಿರ್ಮಾಪಕ ದಯಾಳ್ ಪದ್ಮನಾಭನ್ ಮತ್ತವರ ತಂಡ ಮಾಡಿದೆ.
ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಲೇ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದ ಚಿತ್ರ ಇದು. ಹೀಗೂ ಉಂಟಾ ಎನ್ನುವ ಕುತೂಹಲ ಹೆಚ್ಚಿಸಬಹುದಾದ ಸಸ್ಪೆನ್ಸ್, ಥ್ರಿಲ್ಲರ್ ಕಥನ. ಜಾಲತಾಣ ಸರ್ವವ್ಯಾಪಿಯಾದ ನಂತರ ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುವ ಘಟನೆಗಳು ಕೈಬೆರಳ ತುದಿಯಲ್ಲಿ ಸಿಲುಕುವಂತಾಗಿದೆ. ಇಂತಹುದನ್ನು ಬಳಸಿಕೊಂಡು ಹೇಗೆ ಜನರನ್ನು ಯಾವಾರಿಸುತ್ತಾರೆ ಎನ್ನುವುದನ್ನು ಚಿತ್ರದ ಮೂಲಕ ಅನಾವರಣ ಮಾಡಲಾಗಿದೆ.
ಸುಮನ್ -ದೇವ್ ದೇವಯ್ಯ ಅಮೇರಿಕಾದಲ್ಲಿ ನರ್ಸಿಂಗ್ ತರಬೇತಿ ಪಡೆದು ಭಾರತಕ್ಕೆ ವಾಪಸ್ ಬಂದವ. ಆತನದೋ ಬೇರೆಯವರ ಖಾತೆಯಲ್ಲಿದ್ದ ಹಣವನ್ನು ಕ್ಷಣ ಮಾತ್ರದಲ್ಲಿ ದೋಚು ಕಲೆ ಕರಗತ ಮಾಡಿಕೊಂಡವ. ಆತನ ಸ್ನೇಹಿತ ಚಕ್ರಿ -ಸಾತ್ವಿಕ್ ಕೃಷ್ಣನ್ ಕಾರುಗಳನ್ನು ಕದ್ದು ದುಡ್ಡು ಮಾಡುವ ಕಸುಬು ಮೈಗೂಡಿಸಿಕೊಂಡ.
ಖ್ಯಾತ ಕಾಸ್ಟೂಮ್ ಡಿಸೈನರ್ ಪ್ರಿಯಾ - ಸುಕೃತ ವಾಗ್ಲೆ ತನ್ನ ಕುಟುಂಬದಲ್ಲಿ ಆದ ಘಟನೆಯೊಂದರಿಂದ ಮಾಡುವ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡಾಗ ಮನೆಯಲ್ಲಿ ಅನಾರೋಗ್ಯ ಪೀಡಿತನಾದ ತಮ್ಮನ ಆರೈಕೆಯೇ ಆಕೆಗೆ ಸರ್ವಸ್ವ.ಈಕೆಯ ತಂದೆಯೂ ಕೂಡ ಅದೇ ನೋವಿನಲ್ಲಿ ಕುಡಿತದ ಚಟಕ್ಕೆ ಒಳಗಾದವ. ಕದೀಮರಿಬ್ಬರು ತಮ್ಮ ಕಾರ್ಯಚಟುವಟಿಕೆಗೆ ಪ್ರಿಯಾ ಮನೆ ಆಯ್ಕೆ ಮಾಡಿಕೊಳ್ತಾರೆ. ಕದೀಮರು ಯಾರು, ಅವರು ಮಾಡುವ ಕೆಲಸ ಏನು, ಇದರಲ್ಲಿ ಪ್ರಿಯಾಳ ಪಾತ್ರ ಏನು ಎನ್ನುವುದನ್ನು ಕುತೂಹಲಕಾರಿ.
ನಿರ್ದೇಶಕ ಜೋಡಿ ರವಿ ಕಿರಣ್ , ಚೇತನ್ ಎಸ್ ,ಪಿ ಸಮಾಜಕ್ಕೆ ಜಾಗೃತಿ ಮೂಡಿಸುವ ಕಥೆಯನ್ನು ಜನರ ಮುಂದೆ ಇಟ್ಟಿದ್ದಾರೆ. ಇಂತಹದೊಂದು ಕಥೆಗೆ ನಿರ್ಮಾಪಕ ದಯಾಳ್ ಪದ್ಮನಾಭ್ ಸಾಥ್ ನೀಡಿರುವುದು ಅವರ ಸಿನಿಮಾ ಅಬಿರುಚಿಯ ದ್ಯೋತಕವಾಗಿದೆ.
ನಾಯಕ ದೇವ್ ದೇವಯ್ಯ, ಸ್ವಾತ್ವಿಕ್ ಕೃಷ್ಣನ್ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ನಟಿ ಸುಕೃತ ವಾಗ್ಲೆ, ಮಾತಿಗಿಂತ ಹೆಚ್ಚಾಗಿ ಹಾವ ಭಾವದ ಮೂಲಕ ತಾವೊಬ್ಬ ಉತ್ತಮ ನಟಿ ಎನ್ನುವುದನ್ನು ನಿರೂಪಿಸಿದ್ದಾರೆ. ಶಂಕರ್ ನಾರಾಯಣ್ ಸೇರಿದಂತೆ ಹಲವು ತಮ್ಮ ಪಾತ್ರಗಳಿಗೆ ಜೀವತುಂಬಿದ್ದಾರೆ.