ಚಿತ್ರ : ಟಕಿಲಾ
ನಿರ್ದೇಶನ : ಕೆ. ಪ್ರವೀಣ್ ನಾಯಕ್
ನಿರ್ಮಾಪಕ : ಮರಡಿಹಳ್ಳಿ ನಾಗಚಂದ್ರ, ಮನನ
ಸಂಗೀತ : ರೇಣುಕುಮಾರ್,
ಛಾಯಾಗ್ರಹಣ : ಪಿ.ಕೆ.ಹೆಚ್. ದಾಸ್
ತಾರಾಗಣ : ಧರ್ಮ ಕೀರ್ತಿರಾಜ್ , ನಿಖಿತಾಸ್ವಾಮಿ , ನಾಗೇಂದ್ರ ಅರಸ್, ಕೋಟೆ ಪ್ರಭಾಕರ್, ಸುಮನ್ ಶರ್ಮ ಹಾಗೂ ಇತರರು...
ಜೀವನದಲ್ಲಿ ಕೆಲವೊಮ್ಮೆ ನಮಗೆ ಸಮಯ ಸಂದರ್ಭಗಳೇ ಕಾಲಕ್ಕೆ ತಕ್ಕಂತೆ ಪಾಠ ಕಲಿಸುತ್ತಾ ಸಾಗುತ್ತದೆ. ಒಂದು ಮುದ್ದಾದ ಜೋಡಿಯ ಸುಂದರ ಬದುಕಿನಲ್ಲಿ ಚಟ, ಮೋಹ ಎನ್ನುವುದು ಏನೆಲ್ಲಾ ಅವಾಂತರಗಳನ್ನ ಸೃಷ್ಟಿಸುತ್ತೆ, ಆ ಸಮಸ್ಯೆಗಳಿಗೆ ಯಾವ ರೀತಿ ದಾರಿ ಸಿಗುತ್ತದೆ ಎಂಬುದನ್ನು ರೋಮಾಂಚನಕಾರಿ ದೃಶ್ಯಗಳ ಮೂಲಕ ನಿರ್ದೇಶಕ ಪ್ರವೀಣ್ ನಾಯಕ್ ಅವರು "ಟಕಿಲಾ" ಚಿತ್ರದಲ್ಲಿ ಹೇಳಿದ್ದಾರೆ.
ನಾಯಕ ರವಿ (ಧರ್ಮ ಕೀರ್ತಿರಾಜ್) ತನ್ನ ಪರಿಶ್ರಮದಿಂದ ಒಬ್ಬ ಉದ್ಯಮಿಯಾಗಿ ಬೆಳೆದಿರುತ್ತಾನೆ. ಆತ ಮುದ್ದಾದ ಮಡದಿ ಅಪ್ಸರ (ನಿಖಿತಾ ಸ್ವಾಮಿ)ಳನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿರ್ತಾನೆ. ನಿಜಕ್ಕೂ ಅಪ್ಸರ ಒಬ್ಬ ಸೌಂದರ್ಯದ ಖನಿಯೇ ಆಗಿರುತ್ತಾಳೆ. ಭವ್ಯವಾದ ಬಂಗಲೆಯಲ್ಲಿ ದಂಪತಿಗಳ ಬದುಕು ಸುಂದರವಾಗೇ ಇರುತ್ತದೆ. ಈನಡುವೆ ಯಾರೋ ತನ್ನನ್ನ ನೋಡುತ್ತಿದ್ದಾರೆ ಎಂಬ ಅನುಮಾನ ಅಪ್ಸರಳಿಗೆ ಆಗಿ ಅದನ್ನು ಪತಿ ರವಿಗೆ ತಿಳಿಸುತ್ತಳೆ. ಆತ ಅದನ್ನು ಭ್ರಮೆ ಎಂದು ಸಮಾಧಾನ ಪಡಿಸುತ್ತಾನೆ. ಪಕ್ಕದ ಮನೆಯ ಹುಡುಗ ವರುಣ್ ಈ ಕುಟುಂಬದ ಜೊತೆ ವಿಶ್ವಾಸ ಹೊಂದಿರುತ್ತಾನೆ, ಆದರೆ ಈತನ ಕೆಲಸ ಹುಡುಗಿಯರನ್ನ ಪಟಾಯಿಸುತ್ತಾ ತನ್ನ ಬಲೆಗೆ ಬಿಳಿಸಿಕೊಳ್ಳುವುದು.
ಈ ನಡುವೆ ಗೆಳೆಯರೆಲ್ಲ ಒಮ್ಮೆ ಟ್ರಕ್ಕಿಂಗ್ ಹೋದಾಗ ರವಿ ಹಾಗೂ ಆತನ ಸ್ನೇಹಿತ ಬೆಟ್ಟದಿಂದ ಕಾಲು ಜಾರಿ ಬೀಳುತ್ತಾರೆ. ಪೊಲೀಸ್ ಇನ್ಸ್ಪೆಕ್ಟರ್ ರವಿ ಸತ್ತ ವಿಷಯವನ್ನು ಆತನ ಪತ್ನಿಗೆ ತಿಳಿಸುತ್ತಾನೆ. ಇದರಿಂದ ಕಂಗಾಲಾದ ಅಪ್ಸರಾ, ಒಂಟಿತನದ ಬದುಕಿನಲ್ಲಿ ಟಕಿಲಾ ದುಶ್ಚಟಕ್ಕೆ ದಾಸಿಯಾಗುತ್ತಾಳೆ. ಇದರ ಹಿಂದೆ ಕಾಣದ ಕೈ ಒಂದು ನಿರಂತರ ಕೆಲಸ ಮಾಡುತ್ತಿರುತ್ತದೆ. ಸತ್ತು ಹೋಗಿದ್ದ ತನ್ನ ಗಂಡನ ಆತ್ಮವನ್ನು ಕಂಡು ಹೆದರಿದ ಅಪ್ಸರಗೆ
ಡಾಕ್ಟರ್ ಅದು ನಿನ್ನ ಭ್ರಮೆ ಎಂದು ಧೈರ್ಯ ತುಂಬುತ್ತಾರೆ. ಆದರೆ ಮತ್ತೊಂದು ಕಠೋರ ಸತ್ಯ ಹೊರಬರಲು ಸಮಯ ಕಾಯುತ್ತಿರುತ್ತದೆ. ಅದು ಏನು ಎಂಬುದನ್ನು ನೀವು ಚಿತ್ರ ಮಂದಿರದಲ್ಲೇ
ನೋಡಬೇಕು.
ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಪ್ರಸ್ತುತ ಯುವ ಪೀಳಿಗೆಯ ಮನಸ್ಥಿತಿಯನ್ನು ಹೇಳುತ್ತದೆ. ಕಷ್ಟ ಸುಖ ಏನೇ ಬಂದರೂ ಅನ್ಯೋನ್ಯತಯಿಂದ ಬದುಕು ನಡೆಸಬೇಕು, ಗಂಡ ಹೆಂಡತಿಯ ನಡುವೆ ಮಾನಸಿಕ ಹಾಗೂ ದೈಹಿಕ ಸಂಬಂಧ ಉತ್ತಮವಾಗಿರಬೇಕು, ಅದರಲ್ಲಿ ಒಮ್ಮೆ ಏರುಪೇರಾದರೆ ಅದು ದ್ವೇಷ , ಮೋಸ , ಚಟ ಹೀಗೆ ಬೇರೆಯದೇ ದಿಕ್ಕನ್ನು ತೋರಿಸುತ್ತದೆ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ಇನ್ನು ಸಂಬಂಧಗಳ ಹಿನ್ನೆಲೆಯಲ್ಲಿ ದುಶ್ಚಟಗಳ ಸುಳಿಗೆ ಸಿಕ್ಕವರ ಬಗ್ಗೆ ಒಂದು ಜಾಗೃತಿ ನೀಡುವ ನಿಟ್ಟಿನಲ್ಲಿ ನಿರ್ಮಾಪಕರು ನಿರ್ಮಿಸಿರುವ ಈ ಚಿತ್ರದ ಹಾಡುಗಳು ಉತ್ತಮವಾಗಿದ್ದು , ಸಂಗೀತ ಗಮನ ಸೆಳೆಯುತ್ತದೆ. ಛಾಯಾಗ್ರಾಹಕರ ಕೈಚಳಕ ಸಹ ಉತ್ತಮವಾಗಿದೆ. ನಾಯಕ ಧರ್ಮ ಕೀರ್ತಿರಾಜ್ ಕೊಂಚ ಮೈ ಚಳಿ ಬಿಟ್ಟು ಅಭಿನಯಿಸಿದ್ದು, ವಿಭಿನ್ನ ಪಾತ್ರಕ್ಕೂ ತಾನು ಸಹಿ ಎಂದು ತೋರಿಸಿಕೊಟ್ಟಿದ್ದಾರೆ. ಅದೇ ರೀತಿ ನಿಖಿತಾ ಸ್ವಾಮಿ ಕೂಡ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ತನ್ನ ಪಾತ್ರ ನಿರ್ವಹಿಸಿದ್ದಾರೆ. ಅದೇ ರೀತಿ ಇನ್ಸ್ಪೆಕ್ಟರ್ ಪಾತ್ರವೂ ಕೂಡ ಉತ್ತಮವಾಗಿ ಮೂಡಿ ಬಂದಿದ್ದು, ಉಳಿದಂತೆ ಎಲ್ಲ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಒಟ್ಟಾರೆ ರೋಮಾಂಚನಕಾರಿ ಸಸ್ಪೆನ್ಸ್ ಕಥಾಹಂದರ ಒಳಗೊಂಡ ಟಕಿಲಾ ಚಿತ್ರವನ್ನು ಥೇಟರಿಗೆ ಹೋಗಿ ಒಮ್ಮೆ ಕಣ್ತುಂಬಿಕೊಳ್ಳಬಹುದು.