ಚಿತ್ರ: ಕುಲದಲ್ಲಿ ಕೀಳ್ಯಾವುದೋ
ನಿರ್ಮಾಣ : ಸಂತೋಷ್ ಕುಮಾರ್
ನಿರ್ದೇಶನ : ಕೆ. ರಾಮ್ ನಾರಾಯಣ್
ಸಂಗೀತ : ಮನೋಮೂರ್ತಿ,
ಛಾಯಾಗ್ರಹಣ : ಮನು ಬಿಕೆ.
ಸಂಕಲನ : ದೀಪಕ್ ಸಿ.ಎಸ್.
ಕಲಾವಿದರು : ಮಡೇನೂರು ಮನು, ಮೌನ ಗುಡ್ಡೆ ಮನೆ, ತಬಲನಾಣಿ, ಶರತ್ ಲೋಹಿತಾಶ್ವ, ಕರಿಸುಬ್ಬು, ಯೋಗರಾಜ್ ಭಟ್, ಸೊನಾಲ್ ಮಾಂತೆರೋ ಹಾಗೂ ಇತರರು.
ಸಮಾಜದಲ್ಲಿ ಜಾತಿ ಪದ್ದತಿ, ಮೇಲು ಕೀಳು ಅನ್ನೋದು ಮೊದಲಿಂದಲೂ ನಡೆದುಕೊಂಡು ಬಂದಿದೆ. ಇತ್ತೀಚೆಗಷ್ಟೇ ತೆರೆಕಂಡ ಕೋರ ಅಂಥದೇ ಕಥೆ ಹೊಂದಿತ್ತು. ಇದೀಗ ಕುಲದಲ್ಲಿ ಕೀಳ್ಯಾವುದೋ ಚಿತ್ರದ ಮೂಲಕ ನಿರ್ದೇಶಕ ರಾಮ್ ನಾರಾಯಣ್ ಬೇರೊಂದು ರೀತಿಯ ಕಥೆಯನ್ನು ತುಂಬಾ ಇಂಟರೆಸ್ಟಿಂಗ್ ಆಗಿ ಹೇಳಿದ್ದಾರೆ.
ಪೂರ್ವಜರ ಕಾಲದಿಂದಲೂ ಕಾಡಿನ ಪರಿಸರದಲ್ಲೇ ಬದುಕುತ್ತಿದ್ದ, ಜೀವನೋಪಾಯಕ್ಕಾಗಿ ಮಾರ್ಗ ಕಂಡುಕೊಂಡಿದ್ದ ಜನರನ್ನು ಆ ಕಾಡಿನಿಂದ ರಾಜ್ಯಾಡಳಿತ ಹೊರ ಹಾಕುತ್ತದೆ. ನಂತರ ಆ ನಿರಾಶ್ರಿತರ ಮುಂದಿನ ಬದುಕನ್ನು ಕಟ್ಟಿಕೊಡುವಲ್ಲಿ ನಿರ್ಲಕ್ಷೆ ತೋರುತ್ತದೆ. ತಮಟೆ ಬಾರಿಸುತ್ತ ಜತೆಗೆ ಗಿಡ ಮೂಲಿಕೆಗಳಿಂದ ಮಾಡಿದ ಕೂದಲೆಣ್ಣೆ ( ಕೇಶ ತೈಲ )ಯನ್ನು ಮಾರಿ ಜೀವನ ಸಾಗಿಸುತ್ತಿದ್ದ ಈ ಜನಾಂಗದ ಉತ್ಸಾಹಿ ಯುವಕ ಮಡೆನೂರು ಮನು ಸರ್ಕಾರ, ವ್ಯವಸ್ಥೆ, ಜಾತಿತಾರತಮ್ಯ ಇದೆಲ್ಲದರ ವಿರುದ್ಧ ಹೋರಾಡಿ ತನ್ನ ಜನರಿಗೆ ನ್ಯಾಯ ಕೊಡಿಸುವ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಮಾಚಾರಿ ಧಾರವಾಹಿಯ ಮೂಲಕ ಜನ ಮನ ಸೆಳೆದಿದ್ದ ನಾಯಕಿ ಮೌನ ಗುಡ್ಡೇಮನೆ ಬೆಳ್ಳಿತೆರೆಯ ಮೇಲೆ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರೂ ತನ್ನ ಪಾತ್ರದ ಮೂಲಕವೇ ಗಮನ ಸೆಳೆಯುತ್ತಾರೆ.
ವಿಭಿನ್ನ ಹಾಗೂ ಯಶಸ್ವಿ ಚಿತ್ರಗಳ ನಿರ್ದೇಶಕ ಎನಿಸಿಕೊಂಡಿರುವ ರಾಮ್ ನಾರಾಯಣ್ ಈ ಚಿತ್ರದ ಮೂಲಕ ಬಿದುರುಬಂಡೆ ಬುಡಕಟ್ಟು ಜನಾಂಗದ ಬದುಕು, ಬವಣೆ ಹಾಗೂ ಜಾತಿಯತೆಯ ನೈಜ ಚಿತ್ರಣವನ್ನು ತೆರೆಮೇಲೆ ಮೂಡಿಸಿದ್ದಾರೆ.
ವಿಕಟಕವಿ ಯೋಗರಾಜ್ ಭಟ್ಟರು ಕುಲದಲ್ಲಿ ಕೀಳ್ಯಾವುದೋ ಶೀರ್ಷಿಕೆ ಗೀತೆಯಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಬುಡಕಟ್ಟು ಜನಾಂಗಕ್ಕೆ ಸಹಾಯ ಮಾಡುವ ತಹಶಿಲ್ದಾರ್ ಪಾತ್ರದಲ್ಲಿ ನಟಿ ಸೋನಾಲ್ ಮಾಂತೆರೋ ಗಂಭೀರ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.
ಊರಿನ ಯಜಮಾನನಾಗಿ ಶರತ್ ಲೋಹಿತಾಶ್ವ
ಕೆಳಜಾತಿಯ ಜನರ ಆಸ್ತಿ ಪಾಸ್ತಿ ಕಬಳಿಸುವ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಕುಡಿದು ತಮಟೆ ಬಾರಿಸುತ್ತ ಮನ ಮುಟ್ಟುವಂಥ ಡೈಲಾಗ್ ಗಳನ್ನು ಹೇಳುವ ಮೂಲಕ ನಟ ತನಲಾನಾಣಿ ಅವರು ಪ್ರೇಕ್ಷರ ಹೃದಯಕ್ಕೆ ಹತ್ತಿರವಾಗುತ್ತಾರೆ. ಪ್ರತಿಭಾವಂತಬ ಸಾಹಿತಿಯೂ ಆಗಿರುವ ನಿರ್ದೇಶಕರು ಚಿತ್ರಕಥೆಯಲ್ಲಿ ಮನಮುಟ್ಟುವಂಥ ಸಂಭಾಷಣೆಗಳನ್ನು ಪೋಣಿಸಿದ್ದು ಪ್ರೇಕ್ಷಕರ ಮನ ಮುಟ್ಟುತ್ತಾರೆ.
ಬುಡಕಟ್ಟು ಜನಾಂಗದ ಯುವಕ ಎಂಟೆಗೊದ್ದ
ಚಿಕ್ಜ ವಯಸಿನಲ್ಲೇ ಊರು ಬಿಟ್ಟು ಹೋಗಿರುತ್ತಾನೆ ಆತ ಎಲ್ಲಿ ಹೋದ, ಏನಾದ, ಮತ್ತೆ ಬರುತ್ತಾನಾ, ಇಲ್ಲವಾ, ಆತ ತನ್ನ ಸಮಾಜಕ್ಕೆ ಹೇಗೆ ನ್ಯಾಯ ಒದಗಿಸಿದ ಇದೆಲ್ಲದಕ್ಕೂ ಚಿತ್ರದಲ್ಲಿ ಉತ್ತರವಿದೆ. ನಿರ್ದೇಶಕ ರಾಮ್ ನಾರಾಯಣ್ ಅವರು ಯಾರೂ ಊಹಿಸದ ರೀತಿಯಲ್ಲಿ ಚಿತ್ರದ ಕ್ಲೈಮ್ಯಾಕ್ಸನ್ನು ಚಿತ್ರೀಕರಿಸಿದ್ದಾರೆ.
ಚಿತ್ರದ ೨ ಹಾಡುಗಳು ಸದಾ ಗುನುಗುವಂತಿವೆ. ಚಿತ್ರಕಥೆಗೆ ತಕ್ಕಂತೆ ಹಿನ್ನೆಲೆ ಸಂಗೀತವನ್ನು ಮನೋ ಮೂರ್ತಿ ಅವರು ನೀಡಿದ್ದಾರೆ.
ನಿರ್ಮಾಪಕರಾಗಿ ಸಂತೋಷ್ ಕುಮಾರ್ ಅವರು ಚಿತ್ರದ ಕ್ವಾಲಿಟಿಗೆ ಒತ್ತುಕೊಟ್ಟು ಧಾರಾಳವಾಗಿ ಖರ್ಚು ಮಾಡಿರುವುದು ತೆರೆಯಮೇಲೆ ಕಾಣಿಸುತ್ತದೆ.
ಊರು ಕೇರಿ, ಜಾತಿ ನೀತಿಗಳ ಸುತ್ತ ಸಾಗುವ ಕಥೆ ಒಳಗೊಂಡ ಕುಲದಲ್ಲಿ ಕೀಳ್ಯಾವುದೋ ಚಿತ್ರವನ್ನು ಕನ್ನಡ ಪ್ರೇಕ್ಷಕರು ಒಮ್ಮೆ ಕಣ್ತುಂಬಿಕೊಳ್ಳಲು ಅಡ್ಡಿಯೇನಿಲ್ಲ.