Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬಹುಮುಖಿ ಪ್ರತಿಭೆ ಗೀತಪ್ರಿಯಾ `ತಾಯವ್ವ`ನ ಅಂತರಾಳದ ಮಾತು
Posted date: 29 Thu, May 2025 02:30:07 PM
ಇಂಟ್ರೋ: ಸಿನಿಮಾ ಎಂದರೆ ಹಾಗೆಯೇ, ಅದರ ಶಕ್ತಿಯೇ ಅಂಥದ್ದು! ಸಿನಿಮಾ ಎಂಬುದು ಎಂಥವರನ್ನು ಕೂಡ ತನ್ನತ್ತ ಸೆಳೆಯುವ ಮಾಧ್ಯಮ. ಇಂಥ ಸಿನಿಮಾದ ಸೆಳೆತಕ್ಕೆ ಸಿಕ್ಕು ಪ್ರತಿವರ್ಷ ನೂರಾರು ಪ್ರತಿಭೆಗಳು ಕಲಾವಿದರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ, ತಂತ್ರಜ್ಞರಾಗಿ ಚಿತ್ರರಂಗಕ್ಕೆ ಅಡಿಯಿಡುತ್ತಲೇ ಇರುತ್ತಾರೆ. ಆದರೆ ಹೀಗೆ ಸಿನಿಮಾ ಸೆಳೆತಕ್ಕೆ ಸಿಕ್ಕು ಚಿತ್ರರಂಗಕ್ಕೆ ಬರುವ ಅನೇಕರಲ್ಲಿ, ಕೆಲವೇ ಕೆಲವರನ್ನು ಮಾತ್ರ ಸಿನಿಮಾ ತನಗಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಅಂಥವರನ್ನು ಪೋಷಿಸಿ-ಬೆಳೆಸುತ್ತದೆ. ಅವರಿಂದ ಕಲಾಸೇವೆ ಮಾಡಿಸಿಕೊಳ್ಳುತ್ತದೆ. ಇತ್ತೀಚೆಗೆ ಹೀಗೆ ಸಿನಿಮಾ ಸೆಳೆತಕ್ಕೆ ಸಿಕ್ಕು, ಕನ್ನಡ ಚಿತ್ರರಂಗ ಪ್ರವೇಶಿಸಿರುವವರು ಶ್ರೀಮತಿ ಗೀತಪ್ರಿಯಾ. ಅಂದಹಾಗೆ, ಶ್ರೀಮತಿ ಗೀತಪ್ರಿಯಾ ಬಹುಮುಖ ಪ್ರತಿಭೆ. ಈಗಾಗಲೇ ಶಿಕ್ಷಣ, ಸಮಾಜಸೇವೆ, ಮಹಿಳಾಪರ ಹೋರಾಟ, ಇತರ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಗೀತಪ್ರಿಯಾ, ಈಗ ಕನ್ನಡ ಚಿತ್ರರಂಗಕ್ಕೆ ನಟಿ, ನಿರ್ಮಾಪಕಿ ಮತ್ತು ಗಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ, ನಮ್ಮ ನಡುವೆಯೇ ಸದ್ದಿಲ್ಲದ ಸಾಧಕಿಯಾಗಿ ಬೆಳೆದ, ಅನೇಕ ಮಹಿಳೆಯರಿಗೆ ಮಾದರಿಯಾದ ಗೀತಪ್ರಿಯಾ ತಮ್ಮ ಸಿನಿಯಾನದ ಹಿನ್ನೆಲೆ, ಭವಿಷ್ಯದ ಯೋಜನೆಗಳ ಬಗ್ಗೆ ʼGruhashobaʼದ ಜೊತೆಗೆ ಒಂದಷ್ಟು ಮಾತನಾಡಿದ್ದಾರೆ. 
 
`ಕೃಪಾನಿಧಿ ಗ್ರೂಫ್‌ ಆಫ್‌ ಇನ್ಸ್ಟಿಟ್ಯೂಷನ್ಸ್‌` ಬಗ್ಗೆ ಬಹುತೇಕರು ಕೇಳಿರುತ್ತೀರಿ. ಕರ್ನಾಟಕ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪೈಕಿ `ಕೃಪಾನಿಧಿ ಸಮೂಹ ಶಿಕ್ಷಣ ಸಂಸ್ಥೆಗಳು` ಕೂಡ ಮುಂಚೂಣಿಯಲ್ಲಿ ನಿಲ್ಲುತ್ತವೆ. ಶಿಕ್ಷಣ ಕ್ಷೇತ್ರದಲ್ಲಿ ತನ್ನದೇಯಾದ ಕೊಡುಗೆ ನೀಡುತ್ತಿರುವ ಈ ಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು, ಇಂದು ವಿಶ್ವದಾದ್ಯಂತ ಅನೇಕ ಕ್ಷೇತ್ರಗಳಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ತನ್ನ ಸೇವಾ ಮನೋಭಾವನೆಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹಿರಿಮೆ-ಗರಿಮೆ, ಘನತೆ ಎಲ್ಲವನ್ನೂ ಉಳಿಸಿಕೊಂಡು ಬೆಳೆಯುತ್ತಿರುವ, ಈ ʼಕೃಪಾನಿಧಿ ಗ್ರೂಫ್‌ ಆಫ್‌ ಇನ್ಸ್ಟಿಟ್ಯೂಷನ್ಸ್‌ʼನ ಸಹ-ಸಂಸ್ಥಾಪಕಿ ಮತ್ತು ರೂವಾರಿಗಳಲ್ಲಿ ಒಬ್ಬರಾಗಿರುವವರು ಶ್ರೀಮತಿ ಗೀತಪ್ರಿಯಾ. 
 
ಸುಮಾರು ನಾಲ್ಕು ದಶಕಗಳಿಂದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗೀತಪ್ರಿಯಾ, ಈ `ಕೃಪಾನಿಧಿ` ಸಂಸ್ಥೆಯ ಹಿಂದಿನ ಪ್ರೇರಣಾ ಶಕ್ತಿ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಕೇವಲ ಬೆರಳೆಣಿಯಷ್ಟು ವಿದ್ಯಾರ್ಥಿಗಳಿಂದ ಆರಂಭವಾದ ʼಕೃಪಾನಿಧಿʼ ಎಂಬ ಸಂಸ್ಥೆಯನ್ನು, ಇಂದು ಸುಮಾರು 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುವ ರಾಜ್ಯದ ಪ್ರತಿಷ್ಟಿತ  ಸಮೂಹ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ನಿಲ್ಲುವಂತೆ ಕಟ್ಟಿ ಬೆಳೆಸಿದ ಕೀರ್ತಿ, ಹೆಗ್ಗಳಿಕೆ ಎರಡೂ ಶ್ರೀಮತಿ ಗೀತಪ್ರಿಯಾ ಅವರಿಗೆ ಸಲ್ಲುವಂಥದ್ದು. ಜನಸಾಮಾನ್ಯರ ಕೈಗೆಟಕುವಂತೆ ಜಾಗತಿಕ ಗುಣಮಟ್ಟದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಎಲ್ಲಾ ಹಂತದ ಶಿಕ್ಷಣವನ್ನು ಒಂದೇ ಕಡೆ ಸಿಗುವಂತೆ ಮಾಡಿರುವ ಗೀತಪ್ರಿಯಾ ಅವರದ್ದು ಸದ್ದಿಲ್ಲದ ಸಾಧನೆ. ಗೀತಪ್ರಿಯಾ ಅವರ ಈ ಸಾಧನೆಯನ್ನು ದೇಶ-ವಿದೇಶಗಳ, ನೂರಾರು ಪ್ರತಿಷ್ಟಿತ ಸಂಘ-ಸಂಸ್ಥೆಗಳು, ಸರ್ಕಾರ ಗುರುತಿಸಿ ಗೌರವಿಸಿದೆ.
ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸುಮಾರು ನಾಲ್ಕು ದಶಕಗಳ ಸುದೀರ್ಘ ಅನುಭವವನ್ನು ಹೊಂದಿರುವ ಗೀತಪ್ರಿಯಾ ಅವರ ಮತ್ತೊಂದು ಆಸಕ್ತಿಕರ ಕ್ಷೇತ್ರ ಚಿತ್ರರಂಗ. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಬೇಕು, ಮಹಿಳಾ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬ ಅವರ ಹಂಬಲ ಇಂದು ಅವರನ್ನು ಕನ್ನಡ ಚಿತ್ರರಂಗದಲ್ಲಿ ನಟಿ, ನಿರ್ಮಾಪಕಿ ಮತ್ತು ಗಾಯಕಿಯನ್ನಾಗಿ ಮಾಡಿದೆ. 

`ತಾಯವ್ವ`ನಾಗಿ ಗೀತಪ್ರಿಯಾ ತೆರೆಮುಂದೆ ಬರಲು ತಯಾರಿ...

 
ಕನ್ನಡ ಚಿತ್ರರಂಗದಲ್ಲಿ ʼತಾಯವ್ವʼ ಎಂಬ ಚಿತ್ರದ ಬಗ್ಗೆ ಬಹುತೇಕರು ಕೇಳಿರುತ್ತೀರಿ. ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್‌ ಅಭಿನಯದ ಚೊಚ್ಚಲ ಚಿತ್ರವದು. ಅಂದು ಆ ʼತಾಯವ್ವʼ  ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ʼತಾಯವ್ವʼನಾಗಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಸುಮಾರು ಮೂರು ದಶಕದ ಬಳಿಕ ಅದೇ ʼತಾಯವ್ವʼ ಎಂಬ ಹೆಸರಿನಲ್ಲಿ ಮತ್ತೊಂದು ಹೊಸಚಿತ್ರ ಈಗ ತೆರೆಗೆ ಬರುತ್ತಿದೆ. ಇಂದು ಈ ʼತಾಯವ್ವʼ ಚಿತ್ರದಲ್ಲಿ ʼತಾಯವ್ವʼನಾಗಿ ಗೀತಪ್ರಿಯಾ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಹೆಸರೇ ಹೇಳುವಂತೆ, ʼತಾಯವ್ವʼ ಒಂದು ಅಪ್ಪಟ ಮಹಿಳಾ ಪ್ರಧಾನ ಚಿತ್ರ. ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬಳು ಹೆಣ್ಣುಮಕ್ಕಳನ್ನು ಉಳಿಸಿ, ಬೆಳೆಸಲು ಏನೆಲ್ಲ ಹೋರಾಟ ಮಾಡುತ್ತಾಳೆ, ಹೇಗೆ ಸಮಾಜಕ್ಕೆ ಮಾದರಿಯಾಗಿ

ನಿಲ್ಲುತ್ತಾಳೆ ಎಂಬುದೇ ಈ ಚಿತ್ರದ ಕಥಾಹಂದರ. 

`ತಾಯವ್ವ` ಚಿತ್ರದಲ್ಲಿ `ತಾಯವ್ವ`ನ ಪಾತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಗೀತಪ್ರಿಯಾ, ಈ ಚಿತ್ರಕ್ಕೆ ಬಂಡವಾಳವನ್ನು ಹೂಡಿ ನಿರ್ಮಿಸಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ಬರುವ ಗೀತೆಗಳಿಗೂ ಗಾಯಕಿಯಾಗಿ ಧ್ವನಿಯಾಗಿದ್ದಾರೆ.  ಈಗಾಗಲೇ ಈ `ತಾಯವ್ವ` ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರುವ ತಯಾರಿಯಲ್ಲಿದೆ. 

ಸಾಮಾಜಿಕ ಕಳಕಳಿ, ಕಲಾತ್ಮಕತೆಯೇ `ತಾಯವ್ವ`ನಿಗೆ ಪ್ರೇರಣೆ...

ಅಂದಹಾಗೆ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದ ಶ್ರೀಮತಿ ಗೀತಪ್ರಿಯಾ ಅವರಿಗೆ ʼತಾಯವ್ವʼ ಚಿತ್ರವನ್ನು ಮಾಡಲು ಪ್ರೇರಣೆ ನೀಡಿದ್ದು, ಏಕಕಾಲಕ್ಕೆ ನಟಿ, ನಿರ್ಮಾಪಕಿ ಮತ್ತು ಗಾಯಕಿಯಾಗುವಂತೆ ಮಾಡಲು ಸಾಮಾಜಿಕ ಕಳಕಳಿಯ ಕಲಾತ್ಮಕ ಚಿತ್ರಗಳು ಕಾರಣವಂತೆ! ಈ ಬಗ್ಗೆ ಮಾತನಾಡುವ ಗೀತಪ್ರಿಯಾ, ʼನನಗೆ ಮೊದಲಿನಿಂದಲೂ ಕಲಾತ್ಮಕ ಸಿನಿಮಾಗಳ ಕಡೆಗೆ ಅತೀವ ಆಸಕ್ತಿ. ಅದರಲ್ಲೂ ಮಹಿಳಾ ಪ್ರಧಾನ ಮತ್ತು ಸಾಮಾಜಿಕ ಕಥಾಹಂದರದ ಸಿನಿಮಾಗಳು ನಮ್ಮ ಸಮಾಜದ ಮೇಲೆ ಗಾಢ ಪರಿಣಾಮ ಬೀರುತ್ತವೆ ಎಂಬುದು ನನ್ನ ಬಲವಾದ ನಂಬಿಕೆ. ಹಾಗಾಗಿ, ಇಂಥ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತರಬೇಕು ಎಂಬುದು ನನ್ನ ಉದ್ದೇಶ. ಒಂದೊಳ್ಳೆಯ ಸಿನಿಮಾ ನೋಡುಗರ ಮನಸ್ಸಿಗೆ ಮನರಂಜನೆ ನೀಡುವುದರ ಜೊತೆಗೆ, ಒಂದಷ್ಟು ಬದಲಾವಣೆಗಳಿಗೂ ಕಾರಣವಾಗಬಲ್ಲದು. ಈ ಎಲ್ಲಾ ಅಂಶಗಳೂ ʼತಾಯವ್ವʼ ಸಿನಿಮಾ ಮಾಡಲು ನನಗೆ ಕಾರಣವಾಯಿತುʼ ಎಂದು ʼತಾಯವ್ವʼ ಸಿನಿಮಾ ಹಿಂದಿನ ಕಾರಣ ತೆರೆದಿಡುತ್ತಾರೆ.  

ನೋಡುಗರ ಮನಮುಟ್ಟಿ ಕಾಡುತ್ತಾಳೆ `ತಾಯವ್ವ`

`ತಾಯವ್ವ` ಸಿನಿಮಾದ ಕಥಾಹಂದರ ಬಗ್ಗೆ ಮಾತನಾಡುವ ಗೀತಪ್ರಿಯಾ, ಈ ಸಿನಿಮಾದಲ್ಲಿ ನಮ್ಮ ನಡುವೆಯೇ ನಡೆಯುವಂಥ ಒಂದು ಮನಮುಟ್ಟುವ ಕಥೆಯಿದೆ. ಅದರ ಹಿಂದೊಂದು ಸಂದೇಶವಿದೆ. ಇಡೀ ಸಿನಿಮಾವನ್ನು ಸಹಜವಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದೇವೆ. `ತಾಯವ್ವ` ಸಿನಿಮಾದಲ್ಲಿ ಎಲ್ಲೂ ಕೃತಕತೆ ಇಲ್ಲ. `ತಾಯವ್ವ` ಸಹಜವಾಗಿಯೇ ನೋಡುಗರಿಗೆ ಇಷ್ಟವಾಗುತ್ತಾಳೆ. ತಣ್ಣಗೆ ಕೂತವರನ್ನು ಕೂಡ ಒಮ್ಮೆ ಕಾಡುತ್ತಾಳೆ. ಹೆಣ್ಣನ್ನು ಉಳಿಸಿ-ಬೆಳೆಸಿ ಎನ್ನುತ್ತಾಳೆ. ನಮ್ಮ ನಡುವೆಯೇ ಇರುವ ಒಂದಷ್ಟು ವಿಷಯಗಳನ್ನು ಹೇಳುವ ಮೂಲಕ `ತಾಯವ್ವ` ಯೋಚಿಸುವಂತೆ ಕೂಡ ಮಾಡುತ್ತಾಳೆ. ಗ್ರಾಮೀಣ ಭಾಗದ ಸಾಮಾನ್ಯ ಹೆಣ್ಣೊಬ್ಬಳ ಹಿಂದಿನ ಅಸಾಮಾನ್ಯ ಶಕ್ತಿ ಏನು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆʼ ಎಂದು ವಿವರಣೆ ಕೊಡುತ್ತಾರೆ. 

ಮೊದಲ ಚಿತ್ರ ಕೊಟ್ಟ ಅನುಭವ ಮರೆಯಲಾಗದು...
 
`ಅಮರ ಫಿಲಂಸ್‌` ಮತ್ತು `ಜಯಶಂಕರ ಟಾಕೀಸ್‌` ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗಿರುವ `ತಾಯವ್ವ` ಸಿನಿಮಾಕ್ಕೆ ಸಾತ್ವಿಕ್‌ ಪವನಕುಮಾರ್‌ ನಿರ್ದೇಶನ ಮಾಡಿದ್ದಾರೆ. `ತಾಯವ್ವ` ಸಿನಿಮಾದ ಹಾಡುಗಳಿಗೆ ಅನಂತ್‌ ಆರ್ಯನ್‌ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರಿನ ಗ್ರಾಮಾಂತರ ಭಾಗದಲ್ಲಿ ಇಡೀ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. `ತಾಯವ್ವ` ನನ್ನ ಮೊದಲ ಸಿನಿಮಾವಾದರೂ ಈ ಸಿನಿಮಾ ನನಗೆ ಸಾಕಷ್ಟು ಕಲಿಸಿದೆ. ಕಥೆಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು? ಕಲಾವಿದರು ಸಿನಿಮಾಕ್ಕೆ ಹೇಗೆ ತಯಾರಾಗಬೇಕು? ಸಿನಿಮಾ ನಿರ್ಮಾಣದ ಹಿಂದಿನ ಕೆಲಸ ಹೇಗಿರುತ್ತದೆ? ಒಂದು ಕಥೆಯನ್ನು ತೆರೆಮೇಲೆ ತರಲು ಏನೆಲ್ಲ ಪರಿಶ್ರಮ ಹಾಕಬೇಕು.., ಹೀಗೆ ಸಿನಿಮಾ ನಿರ್ಮಾಣದ ಅನೇಕ ಅನುಭವಗಳನ್ನು ʼತಾಯವ್ವʼ ಸಿನಿಮಾ ನನಗೆ ಕಲಿಸಿದೆ. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂಬ ಸಾರ್ಥಕ ಭಾವ ನಮ್ಮಲ್ಲಿದೆ. ಥಿಯೇಟರಿನಲ್ಲಿ ಸಿನಿಮಾ ನೋಡುವ ಪ್ರೇಕ್ಷಕರಿಗೂ `ತಾಯವ್ವ` ಇಷ್ಟವಾಗುತ್ತಾಳೆ ಎಂಬುದು ಈ ಸಿನಿಮಾದ ನಟಿ ಕಂ ನಿರ್ಮಾಪಕಿ ಗೀತಪ್ರಿಯಾ ಅವರ ಭರವಸೆಯ ಮಾತು.  

ಗೀತಪ್ರಿಯಾ ಅವರ `ತಾಯವ್ವ`ನಿಗೆ ದಿಗ್ಗಜರ ಸಾಥ್!‌
 
ಇದೇ ಮೊದಲ ಬಾರಿಗೆ `ತಾಯವ್ವ`ನಾಗಿ ಪ್ರೇಕ್ಷಕರ ಮುಂದೆ ಬರುತ್ತಿರುವ ಗೀತಪ್ರಿಯಾ ಅವರಿಗೆ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಶುಭ ಹಾರೈಸಿ, ಬೆಂಬಲಕ್ಕೆ ನಿಂತಿದ್ದಾರೆ. `ತಾಯವ್ವ` ಸಿನಿಮಾದ ಟೈಟಲ್‌ ಅನ್ನು ಕೆಲ ತಿಂಗಳ ಹಿಂದೆ ಹಿರಿಯ ನಟಿ ಉಮಾಶ್ರೀ ಮತ್ತು ಮಾಜಿ ಡಿಸಿಎಂ ಆರ್‌. ಅಶೋಕ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಅದಾದ ಬಳಿಕ `ತಾಯವ್ವ` ಸಿನಿಮಾದಲ್ಲಿ ಗೀತಪ್ರಿಯಾ ಅವರು ಹಾಡಿರುವ ಹಾಡನ್ನು ನಟ ಕಿಚ್ಚ ಸುದೀಪ್‌ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈ ವೇಳೆ ಸಿನಿಮಾ, ರಾಜಕೀಯ, ಶಿಕ್ಷಣ ಹೀಗೆ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಹಾಜರಿದ್ದು, ʼತಾಯವ್ವʼನಿಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದರು.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬಹುಮುಖಿ ಪ್ರತಿಭೆ ಗೀತಪ್ರಿಯಾ `ತಾಯವ್ವ`ನ ಅಂತರಾಳದ ಮಾತು - Chitratara.com
Copyright 2009 chitratara.com Reproduction is forbidden unless authorized. All rights reserved.