ಸಮ್ಮ ಸಮಾಜದಲ್ಲಿ ಹೆಣ್ಣು ಎಂದರೆ ಮೊದಲಿಂದಲೂ ತಾತ್ಸಾರ. ಹೆಣ್ಣು ಮಗು ಹುಟ್ಟಿದಾಗ ಆ ಮನೆಯಲ್ಲಿ ತಾಯಿಯಾದವಳು ಎಲ್ಲರಿಂದಲೂ ಎದುರಿಸಬೇಕಾದ ತೆಗಳಿಕೆಯ ಮಾತುಗಳು, ಹಿರಿಯರ ತಾತ್ಸಾರ ಇದೆಲ್ಲವನ್ನೂ ಇಟ್ಟುಕೊಂಡು ಸಮಾಜಕ್ಕೊಂದು ಸಂದೇಶ ಹೇಳುವ ಪ್ರಯತ್ನವಾಗಿ ಮೂಡಿಬಂದಿರುವ ಚಿತ್ರವೇ ತಾಯವ್ವ.
ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ನಡೆಯುವ ಎರಡು ಘಟನೆಗಳನ್ನಿಟ್ಟುಕೊಂಡು ಹೆಣ್ಣು ಮಕ್ಕಳೆಂದರೆ ತುಚ್ಚವಾಗಿ ಕಾಣುವ ಜನರಿಗೆ ಅದರಲ್ಲೂ ಹಿರಿಯರಿಗೆ ಬುದ್ದಿ ಮಾತನ್ನು ಹೇಳುವ ಪ್ರಯತ್ನವನ್ನು ತಾಯವ್ವ ಚಿತ್ರದ ಮೂಲಕ ನಿರ್ದೇಶಕರು ಮಾಡಿದ್ದಾರೆ. ಚಿತ್ರದ ಕಥೆ ನಗರ ಪ್ರದೇಶದ ಕುಟುಂಬವೊಂದರಿಂದ ತೆರೆದುಕೊಳ್ಳುತ್ತದೆ.
ಆ ಕುಟುಂಬದಲ್ಲಿ ತಂದೆ, ತಾಯಿ ಇಬ್ಬರೂ ವಿದ್ಯಾವಂತರೇ, ಆದರೆ ಯಜಮಾನನ ತಾಯಿ ಹಳೇ ಸಂಪ್ರದಾಯದವರು, ಗಂಡು ಎಂದರೆ ವಂಶ ಬೆಳೆಸುವವನು, ಹೆಣ್ಣು ಯಾವತ್ತಿದ್ದರೂ ಪರರ ಮನೆಯ ಸ್ವತ್ತು, ಆಕೆಯನ್ನು ಎಷ್ಟು ಓದಿಸಿದರೂ ಅಷ್ಟೇ, ಅಡುಗೆ ಮಾಡಿಕೊಂಡಿದ್ದರೆ ಅಷ್ಟೇ ಸಾಕು ಎಂಬ ಮನಸ್ಥಿತಿ ಉಳ್ಳವಳು. ಹಾಗಾಗಿ ಒರೋ ಒಬ್ಬ ಮೊಮ್ಮಗಳನ್ನು ಯಾವಾಗಲೂ ಹೀಯಾಳಿಸುತ್ತಲೇ ಇರುತ್ತಾಳೆ, ಅದೇ ಮೊಮ್ಮಗನನ್ನು ಮುದ್ದು ಮಾಡುತ್ತಿರುತ್ತಾಳೆ. ಇದು ಆ ಚಿಕ್ಕ ಹೆಣ್ಣು ಹೃದಯಕ್ಕೆ ಘಾಸಿ ಮಾಡುತ್ತದೆ. ತಂದೆ ತಾಯಿ ಇಬ್ಬರೂ ಮನೆಯಲ್ಲಿಲ್ಲದಾಗ ತಾನು ಅನುಭವಿಸುತ್ತಿರುವ ನೋವನ್ನು ಆ ಹುಡುಗಿ ಶಾಲೆಯಲ್ಲಿ ತನ್ನ ಸ್ನೇಹಿತೆಯರೊಂದಿಗೆ ದು:ಖದಿಂದ ಹೇಳಿಕೊಳ್ಳುತ್ತಾಳೆ. ಇದು ಶಾಲೆಯ ಟೀಚರ್ ಗೆ ಗೊತ್ತಾಗಿ ಆಕೆಯ ತಂದೆಯನ್ನು ಕರೆಸಿ, ಮನೆಯಲ್ಲಿ ನಡೆಯುತ್ತಿರುವ ವಿಷಯವನ್ನು ತಿಳಿಸಿ, ಅದನ್ನು ಸರಿ ಮಾಡಿಕೊಳ್ಳಿ ಎಂದು ಕಳಿಸುತ್ತಾರೆ. ಇದೇ ಕಾರಣಕ್ಕೆ ಆ ಮನೆಯಲ್ಲಿ ಜಗಳ ನಡೆದುಹೋಗುತ್ತದೆ. ಅದನ್ಬು ಕಂಡ ಹುಡುಗಿ ನನ್ನಿಂದಲೇ ಹೀಗಾಗ್ತಿದೆ ಎಂದು ನೊಂದುಕೊಳ್ಳುತ್ತಾಳೆ. ಅದೆಲ್ಲ ಆಕೆಯ ಮನಸಿನ ಮೇಲೆ ಪರುಣಾಮ ಬೀರಿ, ಮೂರ್ಛೆ ಹೋಗಿ ಆಸ್ಪತ್ರೆ ಸೇರಬೇಕಾಗುತ್ತದೆ. ಈ ಘಟನೆಯಿಂದ ಆ ಅಜ್ಜಿಯ ಮನ ಪರಿವರ್ತನೆಯಾಗುತ್ತದೆ.
ಆನಂತರ ಕಥೆ ಗ್ರಾಮೀಣ ಪ್ರದೇಶದ ಹಳ್ಳಿಯ ಕಡೆಗೆ ತಿರುಗುತ್ತದೆ, ಆ ಊರಲ್ಲಿ ಸೂಲಗಿತ್ತಿ ತಾಯವ್ವ ಹಾಗೂ ಮತ್ತೊಂದು ಬಡ ಕುಟುಂಬದಲ್ಲಿ ಕಥೆ ತೆರೆದುಕೊಳ್ಳುತ್ತದೆ. ಆಲ್ಲಿ ಪತಿ, ಪತ್ನಿ, ಮೊಮ್ಮಗಳು ಹಾಗೂ ಅಜ್ಜಿಯ ಪಾತ್ರಗಳಲ್ಲಿ ಹೆಣ್ಣು ಭ್ರೂಣಹತ್ಯೆ ಪ್ರಯತ್ನದ ಸುತ್ತ ನಡೆಯುವ ಕಥಾನಕವಿದೆ.
ತಾಯವ್ವ ಆ ಗ್ರಾಮದ ನೂರಾರು ಜನರಿಗೆ ಹೆರಿಗೆ ಮಾಡಿಸಿ ಜನ್ಮ ನೀಡಿದ ಸೂಲಗಿತ್ತಿ, ಆಕೆ ಎಂದರೆ ಊರಲ್ಲಿ ಎಲ್ಲರಿಗೂ ತುಂಬಾ ಗೌರವ, ತಾಯವ್ವ ಆ ಕುಟುಂಬದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ತಡೆಯುತ್ತಾಳೆ, ಆನಂತರ ಎರಡನೇ ಮಗು ಕೂಡ ಹೆಣ್ಣಾಗಬಹುದೆಂದು ಸ್ವಂತ ಅತ್ತೆಯೇ ಭ್ರೂಣ ಹತ್ಯೆಗೆ ಸಂಚು ರೂಪಿಸುತ್ತಾಳೆ, ಅದು ಕೂಡ ತಾಯವ್ವನ ಸತತ ಪ್ರಯತ್ನದ ಫಲವಾಗಿ ವಿಫಲವಾಗುತ್ತದೆ, ಹೀಗೆ ನಡೆದ ಎರಡೂ ಪ್ರಕರಣಗಳಲ್ಲಿ ಆಧುನಿಕ ಜಗತ್ತಿನಲ್ಲೂ ಹೆಣ್ಣು, ಹೆಣ್ಣುಮಗು ಎಂದರೆ ತಾತ್ಸಾರ ಮಾಡುವ ಜನರಿಗೆ, ಹಿರಿಯರಿಗೆ ಬುದ್ದಿ ಮಾತು ಹೇಳಿರುವುದು ಪ್ರಶಂಸನೀಯ.
ಈ ಮೂಲಕ ನಿರ್ದೇಶಕರು ಒಂದೊಳ್ಳೇ ಪ್ರಯತ್ನ ಮಾಡಿದ್ದಾರೆ. ಜತೆಗೆ ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಸಾಧಿಸಿದ್ದರೆ, ತಾಯವ್ವ ಕನ್ನಡ ಚಿತ್ರರಂಗಕ್ಕೊಂದು ಅತ್ಯುತ್ತಮ ಕೊಡುಗೆಯಾಗುತ್ತಿತ್ತು.