ನೈಜ ಘಟನೆಯನ್ನಾದಿರಿಸಿ ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಯಲ್ಲಿ ಕಟ್ಟಿಕೊಟ್ಟಿರುವ “ ಕಣ್ಣಪ್ಪ” ಚಿತ್ರ ಜೂನ್ 27 ರಂದು ದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರು ಚಿತ್ರದಲ್ಲಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮತ್ತು ನಿರೀಕ್ಷೆ ಹೆಚ್ಚು ಮಾಡಿದೆ.
ತೆಲುಗಿನ ಖ್ಯಾತ ನಟ ಮೋಹನ್ ಬಾಬು ಅವರು ತಮ್ಮ ಪುತ್ರ ವಿಷ್ಣು ಮಂಚು ಅವರಿಗಾಗಿ ನಿರ್ಮಾಣ ಮಾಡಿದ್ದು, ಮೋಹನ್ ಬಾಬು ಅವರು ಕೂಡ ಪ್ರಮುಖ ಪಾತವ್ರದಲ್ಲಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಕಣ್ಣಪ್ಪ, ಡಾ. ರಾಜ್ ಕುಮಾರ್, ಶಿವರಾಜ್ ಕುಮಾರ್ ನಂತರ ವಿಷ್ಣು ಮಂಚು ನೇತೃತ್ವದಲ್ಲಿ ಮೂರನೇ ಬಾರಿಗೆ ಜನರ ಮುಂದೆ ಬರಲು ಸಜ್ಜಾಗಿದೆ.
ಚಿತ್ರಕ್ಕೆ ಬಾಲಿವುಡ್ ನಿರ್ದೇಶಕ ಮುಖೇಶ್ಕುಮಾರ್ ಸಿಂಗ್ ಆಕ್ಷನ್ ಕಟ್ ಹೇಳಿದ್ದು 3 ಸಾವಿರ ವರ್ಷಗಳ ಹಿಂದಿನ ಚಿತ್ರವನ್ನು ಕಣ್ಣಪ್ಪ ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ. ಶಿವಭಕ್ತಿಯನ್ನು ಸಾರುವ ಅಧ್ಯಾತ್ಮಿಕ ಚಿತ್ರ ಇದಾಗಿದ್ದು, ಕನ್ನಡದಲ್ಲಿ ವಿತರಣೆ ಮಾಡುವ ಜವಾಬ್ದಾರಿಯನ್ನು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹೊತ್ತಿದ್ದಾರೆ.
ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ನಿರ್ಮಾಪಕ ಮೋಹನ್ ಬಾಬು ಮತ್ತವರ ತಂಡ ಬೆಂಗಳೂರಿಗೆ ಆಗಮಿಸಿತ್ತು, ಈ ವೇಳೆ ಹಿರಿಯ ನಟ ಶಿವರಾಜ್ ಕುಮಾರ್ ಅವರು “ಕಣ್ಣಪ್ಪ” ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇದರಿಂದ ಚಿತ್ರತಂಡಕ್ಕೆ ರಾಜ್ಯದಲ್ಲಿ ಮತ್ತಷ್ಟು ಆನೆ ಬಲ ಬಂದಂತಾಗಿದೆ.
ನಿರ್ಮಾಪಕ ಮೋಹನ್ ಬಾಬು ಮಾತನಾಡಿ, ಕನ್ನಡದಲ್ಲಿ ನಟಿಸಬೇಕು ಎನ್ನುವ ಬಹುದಿನ ಆಸೆ ಇದೆ. ಪ್ರಿಯ ಮಿತ್ರ ಅಂಬರೀಷ್ ಕೂಡ ಇದ್ದನ್ನೇ ಹೇಳುತ್ತಿದ್ದ. ಶಿವಣ್ಣ ನಿಮ್ಮ ಚಿತ್ರದಲ್ಲಿ ನನಗೆ ವಿಲನ್ ಪಾತ್ರ ಕೊಡಿ ಮೂಲಕ ನನ್ನ ಜೀವನ ದೊಡ್ಡ ಗುರಿ ಈಡೇರಲು ಸಹಕಾರ ಕೊಡಿ, ಚಿತ್ರದಲ್ಲಿ ಅವಕಾಶ ಕೊಡುತ್ತೀರ ಅಲ್ಲವೆ ಎಂದು ವೇದಿಕೆ ಮೇಲೆ ಶಿವರಾಜ್ ಕುಮಾರ್ ಅವರಿಂದ ಮಾತು ತೆಗೆದುಕೊಂಡರು.
ಇನ್ನೂ ಕಣ್ಣಪ್ಪ ಚಿತ್ರ ಜೂನ್ 27ಕ್ಕೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ನ್ಯೂಜಿಲ್ಯಾಂಡ್ ಕಾಡಿನಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದೇವೆ. ಕಣ್ಣಪ್ಪ ಚಿತ್ರ ವರನಟ, ಕನ್ನಡದ ಕಂಠೀರವ ಡಾ.ರಾಜ್ ಕುಮಾರ್ ಅವರು ಮಾಡಿದ್ದ ಚಿತ್ರ. ಆ ನಂತರ ಶಿವರಾಜ್ ಕುಮಾರ್ ನಟಿಸಿದ್ದರು. ಈಗ ನಾವು ಕಣ್ಣಪ್ಪ ಚಿತ್ರವನ್ನು ಜನರ ಮುಂದೆ ತರುತ್ತಿದ್ದೇವೆ. ಡಾ,ರಾಜ್ ಕುಮಾರ್ ಕುಟುಂಬ ಮತ್ತು ಅಂಬರೀಷ್ ಅವರ ಜೊತೆಗಿನ ಒಡನಾಟ ಎಂದಿಗೂ ಮರೆಯಲು ಆಗುವುದಿಲ್ಲ, ಅಂಬರೀಷ್ ಜೊತೆ ಇದ್ದಾಗ ಪರಿಚಯವಾದದ್ದೇ ಸಹೋದರ ರಾಕ್ ಲೈನ್ ವೆಂಕಟೇಶ್. ರಾಜ್ಯದಲ್ಲಿ ಕಣ್ಣಪ್ಪ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ನಿರ್ಮಾಪಕನಾಗಿ ನನ್ನ ಮತ್ತು ನಟನಾಗಿ ಪುತ್ರ ವಿಷ್ಣು ಅವರ ಪ್ರಯತ್ನಕ್ಕೆ ಬೆಂಬಲಿಸಿ ಎಂದು ಕೇಳಿಕೊಂಡರು.
ಈ ವೇಳೆ ಮಾತಿಗಿಳಿದ ಹಿರಿಯ ನಟ ಶಿವರಾಜ್ಕುಮಾರ್, ಕಣ್ಣಪ್ಪ ಚಿತ್ರದಲ್ಲಿ ನಟಿಸಬೇಕಾಗಿತ್ತು. ಹಲವು ಚಿತ್ರಗಳು ಇದ್ದುದರಿಂದ ದಿನಾಂಕದ ಸಮಸ್ಯೆಯಿಂದ ನಟಿಸಲು ಆಗಲಿಲ್ಲ. ಮುಂದೊಂದು ದಿನ ವಿಷ್ಣು ಮಂಚು ಅವರ ಜೊತೆ ಪೂರ್ಣ ಪ್ರಮಾಣದ ಚಿತ್ರದಲ್ಲಿ ನಟಿಸುತ್ತೇನೆ, ಹಿರಿಯ ನಟ ಮೋಹನ್ಬಾಬು ಅವರು ನಮ್ಮ ಕುಟುಂಬದ ಸದಸ್ಯರು ಇದ್ದಹಾಗೆ. ಅವರು ದುಡ್ಡು ಕೊಡಲಿ ಬಿಡಲಿ ಪ್ರೀತಿಯಿಂದ ನಟಿಸಿ ಬರುತ್ತೇನೆ. ಜೊತೆಗೆ ಪ್ರೀತಿಯಿಂದ ಏನು ಬೇಕಾದರೂ ಖರೀದಿ ಮಾಡಬಹುದು ಆದರೆ ದುಡ್ಡಿನಿಂದಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ನಟ ಮೋಹನ್ ಬಾಬು ಅವರು ತಮ್ಮ ಚಿತ್ರದಲ್ಲಿ ವಿಲನ್ ಆಗಿ ನಟಿಸಲು ಅವಕಾಶ ಕೇಳಿದ್ದಾರೆ. ಅವರ ಜೊತೆ ವಿಲನ್ ಪಾತ್ರದಲ್ಲಿ ಹೊಡೆದಾಡಲು ಇಷ್ಟವಿಲ್ಲ, ಅವರ ಬಗ್ಗೆ ವಿಶೇಷ ಪ್ರೀತಿ ಅಭಿಮಾನವಿದೆ. ಅವರ ಸ್ಥಾನಮಾನಕ್ಕೆ ತಕ್ಕಂತ ಪಾತ್ರದಲ್ಲಿ ಅವರ ಜೊತೆ ಅಣ್ಣನ ಪಾತ್ರದಲ್ಲಿ ನಟಿಸುತ್ತೇನೆ. ಇನ್ನೂ ಕಣ್ಣಪ್ಪ ಚಿತ್ರ ಅಪ್ಪಾಜಿ ಮಾಡಿದ್ದರು, ನಾನು ಕೂಡ ಕಣ್ಣಪ್ಪ ಚಿತ್ರ ಮಾಡಬೇಕು ಎಂದು ಅಮ್ಮ ಹೇಳಿದಾಗ ನನ್ನ ಬಳಿ ಆಗಲ್ಲ ಎಂದಿದ್ದೆ. ಆಗ ಅಮ್ಮ ಮಾಡು ಕಂದ ಎಂದು ಪ್ರೋತ್ಸಾಹಿಸಿದ್ದರು. ಚಿತ್ರದಲ್ಲಿ ನಟಿಸಿದೆ. ಚಿತ್ರ ಹಿಟ್ ಆಯಿತು, ಆದಾದ ಮೂರು ದಶಕಗಳ ಬಳಿಕ ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಕಣ್ಣಪ್ಪ ಚಿತ್ರ ಬರುತ್ತದೆ. ಚಿತ್ರ ಯಶಸ್ವಿ ಆಗಲಿದೆ.ಅದಕ್ಕೆ ಕಾರಣ ಗೊತ್ತಿಲ್ಲ, ಕಂಡಿತ ಚಿತ್ರ ಹಿಟ್ ಆಗಲಿದೆ ಎಂದು ಭವಿಷ್ಯ ನುಡಿದರು.
ಕಣ್ಣಪ್ಪ ಚಿತ್ರವನ್ನು ಟಿಕೆಟ್ ಖರೀದಿ ಮಾಡಿ ನಾನೇ ನೋಡುತ್ತೇನೆ,. ಇಡೀ ತಂಡಕ್ಕೆ ಒಳ್ಳೆಯದಾಗಲಿ, ಕಣ್ಣಪ್ಪ ದಂತಹ ಚಿತ್ರಗಳು ಹೆಚ್ಚು ಬರಲಿ, ನಿರ್ಮಾಪಕ ಮೋಹನ್ ಬಾಬು ಮತ್ತು ನಟ ವಿಷ್ಣು ಮಂಚು ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ತಿರುಪತಿ ತಿಮ್ಮಪ್ಪನ ಆಶೀರ್ವಾದ ಶಾಲುಗಳ ಹೊದಿಕೆ.
ಇತ್ತೀಚೆಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡ ಹಿರಿಯ ನಟ ಶಿವರಾಜ್ ಕುಮಾರ್ ಅವರಿಗೆ ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದು ತಂದ ಶಾಲುಗಳನ್ನು ಹಾಕಿ ನೂರ್ಕಾಲ ಬಾಳಿ ಎಂದು ಹಿರಿಯ ನಟ ಮೋಹನ್ ಬಾಬು, ನಟ ವಿಷ್ಣು ಮಂಚು, ನಿರ್ದೇಶಕರ ಮುಕೇಶ್ ಕುಮಾರ್, ಕನ್ನಡದ ವಿತರಕ ಹಾಗು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಇಡೀ ಚಿತ್ರತಂಡ ಶಿವರಾಜ್ ಕುಮಾರ್ ಅವರನ್ನು ಮನದುಂಬಿ ಹಾರೈಸಿತು.
ಈ ವೇಳೆ ಹಿರಿಯ ನಟ ಶಿವರಾಜ್ ಕುಮಾರ್ ಅವರು ಹಿರಿಯ ನಟ ಮೋಹನ್ ಬಾಬು ಅವರನ್ನು ಗೌರವಿಸಿದರು.