ನಿರ್ಮಾಣ: ಲೈಟರ್ ಬುದ್ಧ ಫಿಲಂಸ್
ನಿರ್ದೇಶನ: ಜೆ.ಪಿ. ತುಮ್ಮಿನಾಡು
ತಾರಾಗಣ: ಜೆ.ಪಿ. ತುಮ್ಮಿನಾಡು,ಶನೀಲ್ ಗೌತಮ್, ರಾಜ್ ಬಿ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಣಾಜೆ, ಸಂಧ್ಯಾ ಅರಕೆರೆ, ಮೈಮ್ ರಾಮದಾಸ್ ಹಾಗೂ ಇತರರು.
`ಸು ಫ್ರಮ್ ಸೋ` ಹಾರರ್ ಸ್ಪರ್ಷದ ಜತೆ ಮಂಗಳೂರು ಸೊಗಡಿನಲ್ಲಿ ಮೂಡಿಬಂದಿರುವ ಕಾಮಿಡಿ ಚಿತ್ರ. ಮರ್ಲೂರು ಎಂಬ ಗ್ರಾಮದಲ್ಲಿ ನಡೆಯುವ ಹಾಸ್ಯವೇ ಪ್ರಧಾನವಾಗಿರುವ ಕಥೆ. ಸೋಮೇಶ್ವರದಿಂದ ಮರ್ಲೂರಿಗೆ ಬಂದ ಆತ್ಮದ ಹೆಸರು ಕಲ್ಪನಾ, ಅದು ಜನರ ಬಾಯಿಂದ ಬಾಯಿಗೆ ಹೋಗಿ ಸುಲೋಚನಾ ಆಗುತ್ತದೆ. ಸುಲೋಚನಾ ಯಾರು? ಆಕೆಯ ಮನೆ ಎಲ್ಲಿದೆ
ಅಷ್ಟಕ್ಕೂ ಸುಲೋಚನಾಳ ಆತ್ಮ ಸೋಮೇಶ್ವರದಿಂದ ಮರ್ಲೂರಿಗೆ ಬಂದಿದ್ದು ಹೇಗೆ ಏಕೆ ಬಂತು, ಎಂದು ಪತ್ತೆ ಹಚ್ಚುವುದೇ ಈ ಚಿತ್ರದ ಕಾನ್ಸೆಪ್ಟ್ . ಸೋಮೇಶ್ವರಕ್ಕೂ ಈ ಪಾತ್ರಕ್ಕೂ ಏನು ಸಂಬಂಧ ಎನ್ನುವದರ ಸುತ್ತ ಚಿತ್ರಕಥೆ ಸಾಗುತ್ತದೆ. ಈ ಚಿತ್ರ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗುವುದೇ ಡೈಲಾಗ್ಗಳಿಂದ. ನಿರ್ದೇಶಕ ಜೆಪಿ ತುಮ್ಮಿನಾಡ ಅವರೇ ಚಿತ್ರದ ನಾಯಕ ಕೂಡ. ಇಡೀ ಸಿನಿಮಾದಲ್ಲಿ ಅವರು ಪ್ರೇಕ್ಷಕರನ್ನು ನಗಿಸುತ್ತಲೇ ಸಾಗುತ್ತಾರೆ.
ನಿರ್ದೇಶಕರು ನಗಿಸುತ್ತಲೇ ಸಮಾಜದ ಎರಡು ಪ್ರಮುಖ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಕೂಡ ಮಾಡಿದ್ದಾರೆ. ಮೂಢನಂಬಿಕೆಗಳು, ಊಹಾಪೋಹಗಳು ಹೇಗೆ ನಮ್ಮ ಸಮಾಜವನ್ನು ತಪ್ಪುದಾರಿಗೆ ಎಳೆಯುತ್ತವೆ ಎಂಬುದನ್ನು ವಿಡಂಬನಾತ್ಮಕವಾಗಿ ಹಾಗೂ ಅಷ್ಟೇ ಪರಿಣಾಮಕಾರಿಯಾಗಿ ತೆರೆಯಮೇಲೆ ತೋರಿಸಿದ್ದಾರೆ.
ಕನ್ನಡದಲ್ಲಿ ಹಲವು ಹಾರರ್ ಕಾಮಿಡಿಚಿತ್ರಗಳು ಬಂದಿದ್ದರೂ ಅದೆಲ್ಲಕ್ಕಿಂತ ಈ ಚಿತ್ರ ವಿಭಿನ್ನವಾಗಿ ಕಂಡುಬರುತ್ತದೆ. ಊರಿನ ಅಷ್ಟೊಂದು ಜನರ ನಡುವೆ ಒಬ್ಬನಲ್ಲಿ ಸುಲೋಚನಾಳ ಆತ್ಮ ಹೊಕ್ಕಿದೆ ಎಂದಾಗ. ಅದನ್ನು ಬಿಡಿಸಲು ಜನ ಏನೆಲ್ಲಾ ತಂತ್ರಗಳನ್ನು ಮಾಡುತ್ತಾರೆ ಎನ್ನುವುದೂ ಚಿತ್ರದಲ್ಲಿದೆ.
ಎಲ್ಲಾ ಕಲಾವಿದರು ಪಾತ್ರವೇ ತಾನಾಗಿ ಅಭಿನಯಿಸಿದ್ದಾರೆ, ಸುಮೇದ್ ಮತ್ತು ಸಂದೀಪ್ ತುಳಸಿದಾಸ್ ಅವರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಕಥೆಗೆ ತಕ್ಕಂತೆ ಮೂಡಿಬಂದಿದೆ. ಚಿತ್ರವನ್ನು ಸೊಗಸಗಾಗಿ ಕಟ್ಟಿಕೊಡುವಲ್ಲಿ ಛಾಯಾಗ್ರಾಹಕ ಎಸ್.ಚಂದ್ರಶೇಖರನ್ ಸಫಲರಾಗಿದ್ದಾರೆ.
ಚಿತ್ರದಲ್ಲಿ ಶನೀಲ್ಗುರು, ಪ್ರಕಾಶ್ ತುಮ್ಮಿನಾಡ್, ದೀಪಕ್ರೈ ಪಣಾಜೆ, ಮೈಮ್ ರಾಮದಾಸ್ ಹೀಗೆ ಎಲ್ಲರ ಪಾತ್ರಗಳೂ ಮನರಂಜಿಸುತ್ತವೆ. ಜೊತೆಗೆ ಒಂದು ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರೂ ಕಾಣಿಸಿಕೊಂಡಿದ್ದಾರೆ. ಮೊದಲಿನಿಂದ ಕೊನೆಯವರೆಗೂ ಪ್ರತಿ ದೃಶ್ಯದಲ್ಲೂ ನಗುವಿದೆ.
ನಿರ್ದೇಶನ ಜೆಪಿ ತುಮ್ಮಿನಾಡು ಅವರು ಎಲ್ಲೂ ಹಾಸ್ಯವನ್ನು ತುರುಕಿಲ್ಲ.ಚಿತ್ರದ ಸನ್ನಿವೇಶಗಳೇ ಸಹಜವಾಗಿಯೇ ನಗು ತರಿಸುತ್ತವೆ. ಆ ನಗುವಿನ ಜೊತೆಗೆ, ಒಂದು ಗಂಭೀರವಾದ ಸಂದೇಶವೂ ಇದೆ. ಅದನ್ನು ಪ್ರೇಕ್ಷಕರ ಮೇಲೆ ಹೇರದಂತೆ ನಯವಾಗಿ ಹೇಳಿ, ನಗಿಸುವುದರಲ್ಲಿ ನಿರ್ದೇಶಕರು ಯಶಸ್ವಿಯಾಗಿದದ್ದಾರೆ. ನಗಿಸುತ್ತಲೇ ಭಾವುಕರನ್ನಾಗಿಸುತ್ತಾರೆ. ಚಿತ್ರದಲ್ಲಿ ಆ ವಿಷಯದಲ್ಲಿ ಕೊರತೆಯೇ ಇಲ್ಲ. ಪ್ರತಿ ಫ್ರೇಮಿನಲ್ಲೂ ಪ್ರತಿಭಾವಂತರ ದಂಡೇ ಇದೆ. ರವಿಯಣ್ಣ, ಸತೀಶ, ಆಟೋ ಚಂದ್ರಣ್ಣ, ಗುರೂಜಿ, ಪೇಂಟರ್ ಅಶೋಕ … ಸೇರಿದಂತೆ ಹಲವು ಪಾತ್ರಗಳಿವೆ. ಇವೆಲ್ಲ ಒಂದಕ್ಕಿಂತ ಒಂದು ವಿಭಿನ್ನವಾದ ಮತ್ತು ಅಷ್ಟೇ ಮಜವಾದ ಪಾತ್ರಗಳು. ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶನೀಲ್ ಗೌತಮ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಣಾಜೆ, ಜೆ.ಪಿ. ತುಮ್ಮಿನಾಡು ಸೇರಿದಂತೆ ಕರಾವಳಿ ಭಾಗದ ಹಲವು ಪ್ರತಿಭೆಗಳು ಇಡೀ ಚಿತ್ರವನ್ನು ಎತ್ತಿ ಹಿಡಿದಿದ್ದಾರೆ.