ಕಾಂತಾರ ಚಾಪ್ಟರ್ -1 ಪ್ರಪಂಚದಾದ್ಯಂತ ಬಿಡುಗಡೆಯಾಗಿದ್ದು ಎಲ್ಲೆಡೆ ಪ್ರಶಂಸೆಯ ಸುರಿಮಳೆ ಗಳಿಸುತ್ತಿದೆ. ನಿರ್ದೇಶಕ ರಿಶಭ್ ಶೆಟ್ಟಿ ಅವರ ಬೆನ್ನಿಗೆ ದೈವಗಳ ಶಕ್ತಿಯೇ ನಿಂತಿದೆ ಎನ್ನಬಹುದು. ಇಲ್ಲದಿದ್ದರೆ ಇಂಥ ಚಿತ್ರಗಳನ್ನು ಮಾಡುವುದು ಸುಲಭದ ಮಾತಲ್ಲ.
ಕರಾವಳಿ ದೈವಗಳ ನೆಲೆವೀಡು ಅನ್ನೋದನ್ನು ಈ ಚಿತ್ರದ ಮೂಲಕ ಮತ್ತೊಮ್ಮೆ ಧೃಡೀಕರಿಸಿದ್ದಾರೆ.
ದೈವಗಳನ್ನು ಆರಾಧಿಸುವ ಮುಗ್ಧಜನರ ಬದುಕನ್ನು ಕಟ್ಟಿಕೊಡುವ ಪ್ರಯತ್ನ ಕಾಂತಾರ ಚಿತ್ರದ ಮೂಲಕ ಮಾಡಿದ್ದರು. ಆದರೆ ಈಗ ಕಾಂತಾರ ಚಾಪ್ಟರ್ 1 ಮೂಲಕ ರಿಷಬ್ ಶೆಟ್ಟಿ ಸುಮಾರು 1500 ವರ್ಷ ಹಿಂದಕ್ಕೆ ಹೋಗಿದ್ದಾರೆ. ಕದಂಬರು ಆಳ್ವಿಕೆ ನಡೆಸುತ್ತಿದ್ದ ಕಾಲಘಟ್ಟವನ್ನು ಹಿನ್ನೆಲೆಯಾಗಿಟ್ಟುಕೊಂಡು ಅದ್ಭುತ ಮಾಯಾ ಲೋಕವನ್ನು ವೀಕ್ಷಕರ ಮುಂದಿಟ್ಟಿದ್ದಾರೆ.
ಬಾಂಗ್ರಾದ ರಾಜ ಮನೆತನದವರು ಮತ್ತು ಈಶ್ವರನ ಹೂದೋಟದಲ್ಲಿ ವಾಸಿಸುವ ಸಾಮಾನ್ಯ ಜನರ ನಡುವೆ ನಡೆದಂಥ ಘರ್ಷಣೆಯ ಕಥೆಯನ್ನು ಕಾಂತಾರ: ಚಾಪ್ಟರ್-೧ ಮೂಲಕ ಹೇಳಿದ್ದಾರೆ. ಈಶ್ವರನ ಹೂದೋಟದ ಜನರ ಕಷ್ಟಕ್ಕೆ ಯಾವತ್ತೂ ಆಸರೆಯಾಗಿ ನಿಲ್ಲುವ ಬೆರ್ಮೆ(ರಿಷಬ್ ಶೆಟ್ಟಿ) ಧೈರ್ಯವಂತ. ಬಾಂಗ್ರಾ ರಾಜಮನೆತನದ ಮಹಾರಾಜ ರಾಜಶೇಖರ (ಜಯರಾಮ್), ಆತನ ಮಗ ಯುವರಾಜ ಕುಲಶೇಖರ (ಗುಲ್ಶನ್ ದೇವಯ್ಯ) ಯಾವಾಗಲೂ ಸುರಪಾನ, ಗಾಯನದಲ್ಲೇ ಕಾಲಕಳೆಯತ್ತ, ಯುವರಾಜನಾಗಿದ್ದರೂ ಪ್ರಜೆಗಳ ಕಷ್ಟ ಸುಖಗಳಿಗೆ ಕಿವಿಗೊಡದೆ ಮದಿರೆಯ ಮತ್ತಿನಲ್ಲಿ ತೇಲಾಡುತ್ತಿರುತ್ತಾನೆ, ವ್ಯಾಪಾರಕ್ಕೆಂದು ಬಾಂಗ್ರಾ ಬಂದರಿಗೆ ಬರುವ ಪಕ್ಕದ ಈಶ್ವರನ ಹೂದೋಟ ಕಾಡಿನ ಜನ ಬಂದರಿನಲ್ಲೇ ನೆಲಸುತ್ತಾರೆ. ವ್ಯಾಪಾರ ಕೇಂದ್ರಕ್ಕೆ ಬಂದ ಬಾಂದ್ರಾ ರಾಜಕುಮಾರಿ ಕನಕವತಿ(ರುಕ್ಮಿಣಿ ವಸಂತ್) ಬೆರ್ಮೆ ಶೌರ್ಯ ಪ್ರತಾಪಕ್ಕೆ ಮನಸೋಲುತ್ತಾಳೆ, ಆತನ ಜನರ ವ್ಯಾಪಾರಕ್ಕೆ ಅನುಮತಿ ನೀಡುತ್ತಾಳೆ. ಆ ವೇಳೆಗೆ ಎಚ್ಚೆತ್ತುಕೊಂಡ ಯುವರಾಜ, ಬೆರ್ಮೆ ಇಲ್ಲದ ಸಮಯದಲ್ಲಿ ಆ ಜನರ ತಾಣಗಳಿಗೆ ಸೈನಿಕರೊಂದಿಗೆ ಅವರನ್ನೆಲ್ಲ ಮನಬಂದಂತೆ ಹತ್ಯೆಗೈಯುತ್ತಾನೆ, ನಂತರ ಅಲ್ಲಿಗೆ ಆಗಮಿಸಿದ ಬೆರ್ಮೆಗೆ ಆತನ ಪೂರ್ವಜರ ದೈವ ನೆರವಿಗೆ ಬರುತ್ತೆ, ಘರ್ಷಣೆಯಲ್ಲಿ ಕುಲಶೇಖರ ಹತನಾಗುತ್ತಾನೆ. ಸಹೋದರನನ್ನು ಹತ್ಯೆಗೈದವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗುವ ಕನಕವತಿ ಕಪಟ ತಂತ್ರ ಹೂಡಿ, ಹೂದೋಟದ ಜನರನ್ನು ಕಾಯುತ್ತಿದ್ದ, ದೈವದ ಕಲ್ಲುಗಳನ್ನು ಉಪಾಯದಿಂದ ಬಾಂದ್ರಾಗೆ ತರಿಸಿಕೊಳ್ಳುತ್ತಾಳೆ. ಆ ದೈವಗಳಿಗೆ ದುಗ್ಭಂಧನ ಹಾಕಿಸುತ್ತಾಳೆ, ಕನಕವತಿಯ ಕಪಟ ಅರಿತ ಬೆರ್ಮೆ, ನಂತರ ಹೇಗೆ ಬಾಂಗ್ರಾ ಮಹಾರಾಜ ಹಾಗೂ ಆತನ ಸೇನೆಯ ಆಕ್ರಮಣವನ್ನು ಒಬ್ಬಂಟಿಯಾಗಿ ಎದುರಿಸುತ್ತಾನೆ, ಆಗ ಆತನ ನೆರವಿಗೆ ಯಾರು ಬರುತ್ತಾರೆ ? ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್. ಈ ಹಂತದಲ್ಲಿ ನಡೆಯುವ ರಣರೋಚಕ ಯುದ್ದ ಪ್ರಸಂಗ ಕಣ್ಣುಗಳಿಗೆ ಅತ್ಯದ್ಭುತ ದೃಶ್ಯವೈಭವ. ಈ ಸಮರದಲ್ಲಿ ದೈವದ ಪಾತ್ರವೇನು? ದೈವಕ್ಕೂ ಹೂದೋಟಕ್ಕೂ ಇರುವ ನಂಟು ಯಾವುದು, ಎಂಬುದನ್ನು ತೆರೆಯಮೇಲೆ ಅದ್ಭತವಾದ ವಿಶ್ಯುಯಲ್ ಎಫೆಕ್ಟ್ ಮೂಲಕ ಹೇಳಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ.
ಅದ್ಭುತ ನಟನೆಯ ಮೂಲಕ ರಿಷಬ್ ಶೆಟ್ಟಿ, ಈ ಸಲವೂ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿ ಭಯಂಕರವಾಗಿ ಆರ್ಭಟಿಸಿದ್ದಾರೆ. ಕೊನೆಯ ಭಾಗದಲ್ಲಿ ಬೆರಗು ಮೂಡಿಸುವ ನಟನೆಯೊಂದಿಗೆ ಪ್ರೇಕ್ಷಕರ ಮನದಲ್ಲಿ ನೆಲಸುತ್ತಾರೆ. ಕನಕವತಿಯ ಪಾತ್ರದಲ್ಲಿ ರುಕ್ಮಿಣಿ ವಸಂತ್ ಥೇಟ್ ರಾಜಕುಮಾರಿಯಂತೆಯೇ ಕಂಗೊಳಿಸಿದ್ದಾರೆ. ರೂಪರಾಶಿಯೇ ಮೈದಳೆದಂತಿರುವ ಯುವರಾಣಿ ಕನಕವತಿಯ ಪಾತ್ರದಲ್ಲಿ ಕಂಗೊಳಿಸಿದ್ದಾರೆ. ಕುಲಶೇಖರನ ಪಾತ್ರ ಮಾಡಿರುವ ಗುಲ್ಶನ್ ದೇವಯ್ಯ ಅವರಿಂದ ಇನ್ನಷ್ಟು ಅಭಿನಯ ತೆಗೆಯಬೇಕಿತ್ತು. ತಙದೆಯಾಗಿ ಜಯರಾಮ್ ಅವರದ್ದು ತೂಕದ ನಟನೆ.
ಅಜನೀಶ್ ಲೋಕನಾಥ್ ಅವರ ಸಂಗೀತದ ಹಾಡುಗಳ ವಿಶ್ಯುಯಲ್ ಉತ್ತಮವಾಗಿದೆ. ಹಿನ್ನೆಲೆ ಸಂಗೀತದಲ್ಲಿ ಅಜನೀಶ್ ಅದ್ಭುತ ಮ್ಯಾಜಿಕ್ನ್ನೇ ಮಾಡಿದ್ದಾರೆ. ಅದ್ದೂರಿ ಮೇಕಿಂಗ್ಗೆ ಹೆಚ್ಚಿನ ಗಮನ ನೀಡಿರುವ ನಿರ್ದೇಶಕ ರಿಶಭ್, ಚಿತ್ರಕ್ಕಾಗೇ ಒಂದಿಡೀ ಊರನ್ನು ಸೃಷ್ಟಿಸಿದ್ದಾರೆ. ದೇವಸ್ಥಾನ, ಅರಮನೆ ದರ್ಬಾರ್ ಸೆಟ್ ಗಮನ ಸೆಳೆದರೆ, ಈಶ್ವರ ಹೂದೋಟವೆಂಬ ಕಾಡಿನ ಜಗತ್ತು ಮತ್ತೊಂದು ಮಾಯೆ. ಸಿನಿಮಾದ ಅದ್ದೂರಿತನದ ಮೆರುಗನ್ನು ಇನ್ನಷ್ಟು ಹೆಚ್ಚಿಸಿರುವುದು ವಿ.ಎಫ್.ಎಕ್ಸ್. ಭಯಂಕರವಾಗಿ ಕಾಣುವ ಹುಲಿ, ಕಾಡುಪಾಪಗಳು, ಕೆಲ ಕಾಡಿನ ದೃಶ್ಯಗಳು ಸೇರಿದಂತೆ ಎಲ್ಲವನ್ನೂ ಕಣ್ ಕೋರೈಸುವಂತೆ ಕ್ರಿಯೇಟ್ ಮಾಡಲಾಗಿದೆ. ಎಲ್ಲಿಯೂ ಇದು ಗ್ರಾಫಿಕ್ಸ್ ಅನ್ನಿಸಲ್ಲ. ಛಾಯಾಗ್ರಹಕ ಅರವಿಂದ್ ಕಶ್ಯಪ್ ಅವರ ಕೈಚಳಕ ಅದಕ್ಕ ಮತ್ತಷ್ಟು ಮೆರಗು ನೀಡಿದೆ. ಮದವೇರಿದ ಬಿಳಿಕುದುರೆ ಬೀದಿಯಲ್ಲಿ ಓಡುವ ದೃಶ್ಯ, ಬ್ರಹ್ಮಕಳಶದ ದೃಶ್ಯಗಳನ್ನು ಬಿಗ್ ಸ್ಕ್ರೀನ್ ಮೇಲೆ ಕಣ್ತುಂಬಿಕೊಳ್ಳುವುದೇ ರೋಚಕ. ಕಾಂತಾರ ಮೊದಲಾರ್ಧದಲ್ಲಿ ಏನೋ ಮಿಸ್ ಆದಂತೆ ಅನಸೋದು ಸಹಜ, ಆದರೆ ದ್ವಿತೀಯಾರ್ಧ ಮಾತ್ರ ಆರಂಭದಿಂದ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುತ್ತದೆ. ಅನ್ಯಭಾಷೆಯ ಚಿತ್ರಗಳ ಮೇಕಿಂಗ್ ನೋಡಿ ವ್ಹಾವ್ ಎನ್ನುತ್ತಿದ್ದ ನಮಗೆಲ್ಲ ಅದನ್ನು ನಮ್ಮ ಭಾಷೆಯಲ್ಲೇ ಅನುಭವಿಸುವ ಅವಕಾಶ ಸಿಕ್ಕಿದೆ.
ಕನ್ನಡದಲ್ಲಿ ಇಂಥದೊಂದು ದೊಡ್ಡ ಸಾಹಸ ಮಾಡಿರುವ ಹೊಂಬಾಳೆ ಸಂಸ್ಥೆಗೆ ಕನ್ನಡಿಗರೆಲ್ಲ ಥ್ಯಾಂಕ್ಸ್ ಹೇಳಲೇಬೇಕು.