ದಿ ಬೆಂಗಳೂರು ಕಂಪನಿ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಹರೀಶ್ ರಾಜ್ ತಮ್ಮ ಕುಟುಂಬ ವರ್ಗದವರೊಡನೆ ಸೇರಿ ನಿರ್ಮಿಸಿರುವ ‘ಕಲಾಕಾರ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಅನುಭವವಿರುವ ಹರೀಶ್ ರಾಜ್ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ದ್ವೀಪ ಹಾಗೂ ‘ತಾಯಿ ಸಾಹೇಬ ಚಿತ್ರಗಳಲ್ಲಿ ನಟಿಸಿ ಹೆಸರಾದವರು. ತಮ್ಮ ಪ್ರತಿಭೆಯನ್ನು ನಟನೆಗಷ್ಟೇ ಮೀಸಲಿಡದ ಹರೀಶ್ ಈ ಚಿತ್ರವನ್ನು ನಿರ್ದೇಶಿಸಲು ಮುಂದಾದರು ಹಾಗೂ ಕಥೆ, ಚಿತ್ರಕಥೆಯನ್ನು ಬರೆದರು. ಈ ಚಿತ್ರದಲ್ಲಿ ಸ್ತ್ರೀ ಪಾತ್ರದ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿರುವ ಅವರು ನಾಯಕಿಯರನ್ನು ನಾಚಿಸುವ ಹಾಗೆ ಕಾಣುತ್ತಾರೆ.
‘ಮುಂಗಾರು ಮಳೆ ಯ ಹುಡುಗಿ ಪೂಜಾ ಗಾಂಧಿಯ ಸಹೋದರಿ ರಾಧಿಕಾ ಗಾಂಧಿ ‘ಕಲಾಕಾರ್‘ನ ನಾಯಕಿ. ಹಿಂದೆ ‘ಚಿಕ್ಕ ಮಗಳೂರ ಚಿಕ್ಕ ಮಲ್ಲಿಗೆ ಚಿತ್ರದಲ್ಲಿ ಅಭಿನಯಿಸಿದ ಈಕೆಗೆ ಇದು ದ್ವಿತೀಯ ಚಿತ್ರ. ಬೆಡಗಿ ಸುಮನ್ ರಂಗನಾಥ್ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಸುಧಾ ನರಸಿಂಹರಾಜು, ಅವಿನಾಶ್(ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ), ರಾಜರಾವ್, ವಿಶ್ವ ಮುಂತಾದವರು ಅಭಿನಯಿಸಿದ್ದಾರೆ. ಕರ್ನಾಟಕಕದ ಸುಂದರ ಪ್ರದೇಶಗಳಲ್ಲಿ ‘ಕಲಾಕಾರ‘ನಿಗೆ ಚಿತ್ರೀಕರಣ ನಡೆದಿದೆ. ಗಿರಿಧರ್ ದಿವಾನ್ ಸಂಗೀತ ಸಂಯೊಜಿಸಿರುವ ಚಿತ್ರದ ಹಾಡುಗಳಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ದೊರೆಕ್ಕಿದೆ. ಎಚ್.ಎಂ.ರಾಮಚಂದ್ರ ಛಾಯಾಗ್ರಹಣ, ಶ್ರೀ(ಕ್ರೇಜಿ ಮೈಂಡ್ಸ್) ಸಂಕಲನ ಈ ಚಿತ್ರಕ್ಕಿದೆ.